ಮಂಗಳೂರು, ಫೆ 07 (DaijiworldNews/HR): ಕೇಸರಿ ಶಾಲು ಬಗ್ಗೆ ನಾವು ತಲೆಗೆಡಿಸಲ್ಲ. ಮೊದಲು ದೇಶ ಉಳಿಸಬೇಕು, ಅದರ ಬಗ್ಗೆ ಚಿಂತಿಸುತ್ತಿದ್ದೇವೆ. ಹಿಜಾಬ್ ವಿಚಾರದಿಂದ ದೇಶಕ್ಕೆ ದೊಡ್ಡ ಅವಮಾನವಾಗ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಿಜಾಬ್- ಕೇಸರಿ ಶಾಲು ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕರಾವಳಿಗೆ ಒಳ್ಳೆಯ ಧಾರ್ಮಿಕ ಇತಿಹಾಸವಿದೆ. ಉದ್ಯೋಗ ಸೃಷ್ಟಿಗೆ ಬೇಕಾದ ಅವಕಾಶಗಳಿವೆ. ಮಾನವ ಸಂಪನ್ಮೂಲಕ್ಕೆ ಕರಾವಳಿ ಕೊಡುಗೆ ದೊಡ್ಡದು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕರ್ನಾಟಕವನ್ನು ಹೊಗಳಿದ್ದರು, ಆದರೆ ಇಂದು ಕರ್ನಾಟಕದಿಂದ ಭಾರತವನ್ನ ನೋಡುವಂತಾಗಿದೆ. ಧಾರ್ಮಿಕತೆಯ ಸಣ್ಣ ವಿಚಾರವಿಟ್ಟುಕೊಂಡು ಚೆಲ್ಲಾಟ ಆಡುವ ಪ್ರಯತ್ನ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ.
ಸಂವಿಧಾನವೇ ಕಾಂಗ್ರೆಸ್ ಧರ್ಮ. ಕೆಲವರು ಹಿಜಾಬ್ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹೈಕೋರ್ಟ್ ತೀರ್ಮಾನವನ್ನು ನಾವು ಗೌರವಿಸುತ್ತೇವೆ. ರಾಹುಲ್ ಗಾಂಧಿ ಅವರ ಹೇಳಿಕೆಯೇ ಕಾಂಗ್ರೆಸ್ ನಿಲುವು. ಸಂಪ್ರದಾಯ ಬದಲಾವಣೆ ಮಾಡುವ ಪ್ರಯತ್ನ ಆಗುತ್ತಿದೆ. ವಿಷಬೀಜ ಬಿತ್ತುವಂತಹ ವಿಚಾರವನ್ನು ಖಂಡಿಸುತ್ತೇನೆ.ಯುವಕರಿಗೆ ಉದ್ಯೋಗ ಕೊಡುವುದೇ ನಮ್ಮ ಆದ್ಯತೆ ಎಂದಿದ್ದಾರೆ.
ಸಚಿವ ಸುನಿಲ್ ಕುಮಾರ್ ಹಿಜಾಬ್ ತಾಲಿಬಾನೀಕರಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರು ಪ್ರಮಾಣ ವಚನಕ್ಕೆ ಬದ್ಧರಾಗಿರಬೇಕು. ಬೇರೆ ಏನಾದ್ರೂ ಆಸೆಯಿದ್ದರೆ ಪ್ರಮಾಣ ವಚನದಲ್ಲಿ ಬದಲಾಯಿಸಿ ಹೇಳಿ. ಆವಾಗ ನಾನು ಮಾತನಾಡುತ್ತೇನೆ ಎಂದರು.
ಇನ್ನು "ಹಿಜಾಬ್ ವಿವಾದದ ಹಿಂದೆ ಎಸ್ಡಿಪಿಐ ಇದೆ ಅನ್ನೋ ವರದಿ ತಲುಪಿದೆ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಯಾರೂ ವರದಿ ಕೊಟ್ಟಿಲ್ಲ, ಅದರ ಅಗತ್ಯವೂ ಇಲ್ಲ. ಯುವಕರ ಮನಸ್ಸಲ್ಲಿ ವಿಷಬೀಜ ಬಿತ್ತುವ ಕೆಲಸ ಅನೇಕರಿಂದ ನಡೆದಿದೆ. ಮುಸ್ಲಿಂ ಶಾಸಕರಿಗೆ ಪರ ನಾವು ಮಾತಾಡುತ್ತಿದ್ದೇವೆ. ರಾಹುಲ್ ಗಾಂಧಿ ಅವರೇ ಟ್ವೀಟ್ ಮೂಲಕ ನಿಲುವು ವ್ಯಕ್ತಪಡಿಸಿದ್ದಾರೆ ಅದುವೇ ಕಾಂಗ್ರೆಸ್ ನಿಲುವು ಆಗಿರುತ್ತದೆ" ಎಂದು ಹೇಳಿದ್ದಾರೆ.