ಕಾರ್ಕಳ, ಫೆ 07 (DaijiworldNews/HR): ಶಿಕ್ಷಣ, ಆರೋಗ್ಯ, ಗ್ರಾಮೀಣ ಬದುಕು ಒಂದಕ್ಕೊಂದು ಪೂರಕವಾಗಿದೆ. ನಿಟ್ಟೆ ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸುವಲ್ಲಿ ಯಶಸ್ಸುಕಂಡಿದೆ. ಪ್ರಧಾನಿಯವರ ಮಹಾತ್ಕಾಂಕ್ಷಿ ಯೋಜನಯಾಗಿರುವ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ನಿಟ್ಟೆ ಗ್ರಾಮ ಪೂರಕವಾಗಿರಲು ನಿಟ್ಟೆ ವಿದ್ಯಾ ಸಂಸ್ಥೆ ಕಾರಣವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು ಹಾಗೂ ಪಿಯು ಕಾಲೇಜುಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ನಿಟ್ಟೆ ವಿದ್ಯಾಯೂ ಆರೋಗ್ಯ ಸೇವೆಯ ಮೂಲಕ ಸಮಾಜದ ಆರೋಗ್ಯ ಬದ್ಧತೆ ನೀಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕ್ರಾಂತಿ ಮೂಡಿಸಿದೆ ಹಾಗೂ ಗ್ರಾಮೀಣ ಬದುಕಿಗೆ ಬೇಕಾದ ಎಲ್ಲಾ ಸೌಲಭ್ಯಗಳ ನೇತೃತ್ವವನ್ನು ವಹಿಸಿಕೊಂಡು ಸಮಾಜದ ಬದಲಾವಣೆ ಒತ್ತುನೀಡಿದೆ. ಸರಕಾರ, ಶಾಸಗಿ, ವೈಯಕ್ತಿಕ ಕೊಡುಗೆಗಳ ಜೊತೆಯಾಗಿ ಇದ್ದಾಗ ಕಾರ್ಕಳದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂಬ ಅಭಿಮತ ವ್ಯಕ್ತಪಡಿಸಿದರು.
ಕಾರ್ಕಳ ಅಭಿವೃದ್ಧಿಯಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆ ಒಂದು ಮೈಲುಗಲ್ಲಾಗಿದೆ. ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ. ಎಲ್ಲಾ ಕೋರ್ಸ್ಗಳು ಒಳಗೊಂಡ ಉತ್ತಮ ಕ್ಯಾಂಪಸ್ ಇಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಸುನೀಲ್ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವು ಎಲ್ಲ ವರ್ಗದವರಿಗೂ ಲಭಿಸುವಂತಾಗಬೇಕು. ಆ ಮೂಲಕ ಸ್ವಾವಲಂಭಿ ಬದುಕಿಗೆ ಮುನ್ನುಡಿಯಾಗಬೇಕು. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕೊರತೆ ಇರುವುದನ್ನು ಸರಕಾರ ಆರ್ಧೈಸಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದ್ದು, ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಿಷ್ಠೆ, ಪ್ರಮಾಣಿಕತೆ, ಶಿಸ್ತು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಲಿಕೆಗೆ ಪ್ರಮುಖ್ಯತೆ ನೀಡಬೇಕು. 1981 ರಲ್ಲಿ ಕಂಡ ನಿಟ್ಟೆ ಶಿಕ್ಷಣ ಸಂಸ್ಥೆಗೂ ಪ್ರಸ್ತುತ ದಿನಗಳಲ್ಲಿ ಕಾಣುವ ನಿಟ್ಟೆ ವಿದ್ಯಾ ಸಂಸ್ಥೆಗೂ ಅಜಗಜಾಂತರ ವ್ಯತ್ಯಾಸ ಕಾಣಬದುದಾಗಿದೆ. ನಿಟ್ಟೆ ಎಂಬ ಗ್ರಾಮದ ಹೆಸರಿಟ್ಟುಕೊಂಡು ರಾಷ್ಟ್ರಮಟ್ಟದ ವರೆಗೂ ಸಂಸ್ಥೆಯೂ ಖ್ಯಾತಿ ಪಡೆದಿದೆ. ಇಲ್ಲಿ ಕಲಿತ್ತಿದ್ದ ಅದೆಷ್ಟೋ ವಿದ್ಯಾರ್ಥಿಗಳು ರಾಷ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ನಗರ ಪ್ರದೇಶಗಳನ್ನು ಕೇಂದ್ರೀಕೃತವಾಗಿಟ್ಟು ಕೊಂಡು ವಿದ್ಯಾ ಸಂಸ್ಥೆಯನ್ನು ಆರಂಭಿಸಿಲ್ಲ. ಗ್ರಾಮೀಣ ಭಾಗವನ್ನು ಗುರುತಿಸಿ ಅಲ್ಲಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇವೆ. ಈ ಸಂಸ್ಥೆಗಳಲ್ಲಿ 30ಕ್ಕೂ ಮಿಕ್ಕಿ ಕೋರ್ಸ್ಗಳಿವೆ. 30 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯಿಂದ ಕ್ರಾಂತಿಕಾರಿ ಬದಲಾವಣೆಯೂ ಶಿಕ್ಷಣದಲ್ಲಿ ಕಾಣಬದುದು. ಆ ಮೂಲಕ ಗ್ರಾಮಸ್ವರಾಜ ಸ್ಥಾಪನೆಯ ಮೂಲಕ ರಾಮರಾಜ್ಯ ಕನಸ್ಸುನನಸಾಗಬಹುದೆಂದರು.
ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ವಿದ್ಯುತ್ ಸರಬರಾಜು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವ್ಯವಸಾಯಕ್ಕೆ ಅಗತ್ಯವಾದ ನೀರು ಸರಬರಾಜು ಮಾಡುವ ಮೂಲಕ ನಿಟ್ಟೆಯ ನಿಷ್ಠೆಯನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಸಹಕಾರ ನೀಡಬೇಕೆಂದು ಸಚಿವ ವಿ.ಸುನೀಲ್ಕುಮಾರ್ ಅವರಲ್ಲಿ ಸಂಸ್ಥೆಯ ಅಧ್ಯಕ್ಷ ವಿನಯಹೆಗ್ಡೆ ಬೇಡಿಕೆ ಮುಂದಿಟ್ಟರು.
ಅಪರ ಕುಲಪತಿ ವಿಶಾಲಹೆಗ್ಡೆ, ನಿಟ್ಟೆ ಯುನಿವರ್ಸಿಟಿಯ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ಉಪಕುಲಪತಿ ಡಾ. ಎಂ ಎಸ್ ಮೂಡಿತ್ತಾಯ, ಯೋಗೀಶ್ ಹೆಗ್ಡೆ, ನಿರಂಜನ ಚಿಪ್ಲೂಣ್ಕರ್, ಗುರುಪ್ರಸಾದ್ ಅಡ್ಯಂತಾಯ, ರೋಹಿತ್ ಪೂಂಜಾ,ನಿರಂಜನ್, ರವೀಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು. ವೀಣಾ ಬಿ.ಕೆ.ಸ್ವಾಗತಿಸಿದರು.ಡಾ. ಪ್ರಕಾಶ್ ಶೆಣೈ ನಿರೂಪಿಸಿದರು. ಭವಾನಿ ಶೆಟ್ಟಿ ಧನ್ಯವಾದವಿತ್ತರು.
ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಎನ್. ವಿನಯ ಹೆಗ್ಡೆ, ಅಪರ ಕುಲಪತಿ ವಿಶಾಲಹೆಗ್ಡೆ, ನಿಟ್ಟೆ ಯುನಿವರ್ಸಿಟಿಯ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ಉಪಕುಲಪತಿ ಡಾ. ಎಂ ಎಸ್ ಮೂಡಿತ್ತಾಯ, ಯೋಗೀಶ್ ಹೆಗ್ಡೆ, ನಿರಂಜನ ಚಿಪ್ಲೂಣ್ಕರ್, ವೀಣಾ ಬಿ.ಕೆ ಉಪಸ್ಥಿತರಿದ್ದರು.