ಕುಂದಾಪುರ, ಫೆ 07 (DaijiworldNews/MS): ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿರುವಂತೆ ಏಕರೂಪ ವಸ್ತ್ರ ಸಂಹಿತೆ ಪಾಲನೆಗೆ ಸರಕಾರ ಆದೇಶ ನೀಡಿದ ಬಳಿಕವೂ ಜಿಲ್ಲೆಯಲ್ಲಿ ಹಿಜಾಬ್ - ಕೇಸರಿ ಶಾಲು ವಿವಾದ ಮುಂದುವರಿದಿದೆ.
ಫೆ.07 ರ ಸೋಮವಾರ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು. ಕೇಸರಿ ಶಾಲು ಹಾಕಿಕೊಂಡು ಕ್ಯಾಂಪಸ್ ಪ್ರವೇಶಿಸಲು ಯತ್ನಿಸಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದರು. ಹಾಗೂ ಕುಂದಾಪುರ ಎಸ್ಐ ಸದಾಶಿವ ಗವರೋಜಿ ತಡೆ ಒಡ್ಡಿದರು.
ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಶಾಲುಗಳನ್ನು ತೆಗೆದ ನಂತರವೇ ಕ್ಯಾಂಪಸ್ ಒಳಗೆ ಪ್ರವೇಶಿಸಲು ಕಟ್ಟುನಿಟ್ಟಾಗಿ ಆದೇಶಿಸಿದರು. ಪ್ರಾಶುಪಾಲರ ಜೊತೆ ವಾಗ್ವಾದಕ್ಕೆ ಇಳಿದ ವಿದ್ಯಾರ್ಥಿಗಳು ಸ್ಕಾರ್ಫ್ / ಹಿಜಾಬ್ ಬುರ್ಖಾ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡಿದರೆ, ನಾವು ಕೇಸರಿ ಶಾಲು ಧರಿಸಿ ಮತ್ತೆ ಧರಿಸುವುದಾಗಿ ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ಸಂದರ್ಭ , ಸರ್ಕಾರದ ಆದೇಶದ ಪ್ರಕಾರ ಕ್ಯಾಂಪಸ್ ಒಳಗೆ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಾಂಶುಪಾಲ ಗಣೇಶ್ ಸ್ಪಷ್ಟಪಡಿಸಿದ್ದು ಆ ಬಳಿಕ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ತೆಗೆದು ತರಗತಿಗಳನ್ನು ಪ್ರವೇಶಿಸಿದರು.
ಕುಂದಾಪುರ ಸರ್ಕಾರಿ ಕಾಲೇಜು:
ಇನ್ನು ಹಿಜಾಬ್ - ಕೇಸರಿ ಶಾಲು ವಿವಾದ ಕುಂದಾಪುರ ಸರ್ಕಾರಿ ಕಾಲೇಜಿನಲ್ಲೂ ಮುಂದುವರಿದಿದ್ದು,ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಜೊತೆ ಸರ್ಕಾರದ ಆದೇಶ ತಿಳಿಸಿ ಪ್ರಾಂಶುಪಾಲರ ಮಾತುಕತೆ ನಡೆಸಿದ್ದಾರೆ.
ಆದರೆ ಹಿಜಾಬ್ ಧರಿಸಿ ತರಗತಿಗೆ ಹೋಗಲು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದು, ಮನವೊಲಿಕೆಗೆ ಸ್ಪಂದಿಸದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕೂರಲು ವ್ಯವಸ್ಥೆ ಮಾಡಿದ್ದಾರೆ.
ಇದೇ ವಿದ್ಯಾರ್ಥಿನಿಯರು ಕಳೆದ ವಾರ ಗೇಟಿನಿಂದ ಹೊರಗೆ ಕುಳಿತು ಪ್ರತಿಭಟಿಸಿದ್ದರು.