ಮಂಗಳೂರು, ಫೆ, 07 (DaijiworldNews/MS): ಮಾದಕ ವಸ್ತು ಎಂಡಿಎಂಎ ನ್ನು ಕಾಸರಗೋಡಿನಿಂದ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಕಾಸರಗೋಡಿನ ಅಬ್ದುಲ್ ರಹ್ಮಾನ್ ಬಂಧಿತ ಆರೋಪಿ. ಈತನಿಂದ 75 ಸಾವಿರ ರೂ. ಮೌಲ್ಯದ ಎಂಡಿಎಂಎ, ಸಾಗಾಟಕ್ಕೆ ಬಳಸಿದ ಕಾರು ಸಹಿತ 3,30,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲಾಖೆ ಅಧಿಕಾರಿಗಳು ಮಂಗಳೂರಿನಿಂದ ತಲಪಾಡಿ ಕಡೆಗೆ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ಕಾರೊಂದು ರಸ್ತೆ ಬದಿ ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಇವರನ್ನು ವಿಚಾರಿಸಿದಾಗ ಕಾಸರಗೋಡಿನಿಂದ ಮಾದಕ ವಸ್ತುವನ್ನು ಇಲ್ಲಿನ ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿ ಮಾರಾಟಕ್ಕೆ ತಂದಿರುವ ಬಗ್ಗೆ ತಿಳಿದುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.