ಮಂಜೇಶ್ವರ, ಫೆ. 06 (DaijiworldNews/SM): ಹೊಂಡದಲ್ಲಿ ಹೂತು ಹಾಕಲಾಗಿದ್ದ ಜಾರ್ಖಂಡ್ ಮೂಲದ ಕಾರ್ಮಿಕನ ಮೃತದೇಹವನ್ನು ಮಂಜೇಶ್ವರ ಠಾಣಾ ಪೊಲೀಸರು ಮೇಲಕ್ಕೆತ್ತಿದ್ದಾರೆ.
ಆರ್ ಡಿಒ ಹಾಗೂ ಫಾರೆನ್ಸಿಕ್ ತಜ್ಞರ ಸಮ್ಮುಖದಲ್ಲಿ ಪೊಲೀಸರು ಮೃತದೇಹ ಮೇಲಕ್ಕೆತ್ತಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯ ಬಾಯಾರು ಕನಿಯಾಲ ಸುದೆಂಬಳದಲ್ಲಿ ಘಟನೆ ನಡೆದಿದೆ. ಶಿವಾಜಿ ಯಾನೆ ಶಿವರಂಜನ್ ಎಂಬವನ ಮೃತ ದೇಹವನ್ನು ತೋಟದ ಮಾಲಕ ಹಾಗೂ ಇತರ ಇಬ್ಬರು ಕಾರ್ಮಿಕರು ಸೇರಿಕೊಂಡು ಹೂತು ಹಾಕಿದ್ದರು.
ಡಿ 21 ರಂದು ಘಟನೆ ನಡೆದಿದ್ದು, ಒಂದೂವರೆ ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಕಾರ್ಮಿಕನ ಸಾವಿಗೆ ಕಾರಣ ಅಸ್ಪಷ್ಟವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಗಿದೆ.