ಮಂಗಳೂರು, ಫೆ 06 (DaijiworldNews/KP): ಕುಳೂರಿನಲ್ಲಿರುವ ಸೈಂಟ್ ಆಂಟನಿ ಚರ್ಚ್ಗೆ ಸೇರಿದ್ದ ಪ್ರಾರ್ಥನಾ ಕೇಂದ್ರ ಕಟ್ಟಡವನ್ನು ನೆಲಸಮಗೊಳಿಸಿರುವ ಆರೋಪದ ಮೇಲೆ ಪಂಜಿಮೊಗರು ಮೈದಾನಕ್ಕೆ ಫೆ.6ರಂದು ಡಿಸಿಪಿ ಹರಿರಾಮ್ ಶಂಕರ್, ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ, ನಗರದ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲನೆ ನಡೆಸಿದರು.
ಪಂಜಿಮೊಗರುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ, 2005ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕಟ್ಟಡಕೆಂದು ಜಾಗವನ್ನು ಮಂಜೂರು ಮಾಡಿದ್ದು, ಆದರೆ ಪಕ್ಕದಲ್ಲಿ ತ್ರಿಕೋನ ಆಕಾರದ ಜಮೀನಿಗೆ ಸರ್ಕಾರಿ ಭೂಮಿಯನ್ನು ಕೂಡ ಪರಿವರ್ತಿನೆ ಮಾಡಲಾಗಿದೆ ಎಂದರು.
ಈ ಜಾಗ ಸರ್ಕಾರಕ್ಕೆ ಸೇರಿದ್ದು ಎಂದು ಆರ್ಟಿಸಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ, ಈಗಾಗಲೇ ಅಂಗನವಾಡಿ ಕಟ್ಟಡ ರಚನೆಗಾಗಿ ಸರ್ಕಾರದಿಂದ 16 ಲಕ್ಷ ರೂ. ಮಂಜೂರಾಗಿದ್ದು, ಕೆಲ ತಿಂಗಳುಗಳ ಹಿಂದೆ ಶಂಕುಸ್ಥಾಪನೆ ಮಾಡುವ ಯೊಚಿಸಲಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು ಎಂದು ಶಾಸಕರು ತಿಳಿಸಿದರು.
ಡಿಸಿಪಿ ಹರಿರಾಮ್ ಶಂಕರ್ ಮಾತನಾಡಿ, ಈ ಜಾಗ ಸರಕಾರಕ್ಕೆ ಸೇರಿದ್ದು, ಕಟ್ಟಡವನ್ನು ಇಲಾಖೆಯವರು ನೆಲಸಮ ಮಾಡಿದ್ದಾರೆಯೇ ಅಥವಾ ಬೇರೆಯವರು ನೆಲಸಮ ಮಾಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು, ಭೂ ವಿವಾದವನ್ನು ಮುಂದಿಟ್ಟುಕೊಂಡು ಕೆಲವರು ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಜಾಗವನ್ನು ಸರ್ಕಾರವು 2005ರಲ್ಲಿ ಅಂಗನವಾಡಿಗೆಂದು ಮಂಜೂರು ಮಾಡಲಾಗಿತ್ತು, ಹಳೆಯ ಕಟ್ಟಡವನ್ನು ಇಲಾಖೆ ಧ್ವಂಸಗೊಳಿಸಿಲ್ಲ, ಯಾರೂ ಈ ಕಟ್ಟಡವನ್ನು ನೆಲಕೆಡವಿದ್ದಾರೊ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ಇನ್ನು ಶ್ರೀ ಸತ್ಯ ಕೋಡ್ದಬ್ಬು ಸೇವಾ ಸಮಿತಿಯು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಪ್ರಾರ್ಥನಾ ಕೇಂದ್ರದ ಆವರಣಕ್ಕೆ ನುಗ್ಗಿ ಕಟ್ಟಡ, ಕಾಂಪೌಂಡ್ ಗೋಡೆ, ಮರಗಳನ್ನು ನೆಲಸಮಗೊಳಿಸಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಶ್ರೀ ಸತ್ಯ ಕೋಡ್ದಬ್ಬು ಸೇವಾ ಸಮಿತಿ ವಿರುದ್ಧ ಸೈಂಟ್ ಆಂಟನಿ ಹೋಲಿ ಕ್ರಾಸ್ ಕಟ್ಟಡ ಸಮಿತಿ ಅಧ್ಯಕ್ಷ ಆಂಟನಿ ಪ್ರಕಾಶ್ ಲೋಬೋ, ಸಿಪ್ರಿಯನ್ ಡಿಸೋಜಾ, ಫ್ರಾನ್ಸಿಸ್ ಪಿಂಟೋ ಮತ್ತು ವಲೇರಿಯನ್ ಲೋಬೋ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.