ಕಾರ್ಕಳ, ಫೆ 06 (DaijiworldNews/HR): ಹೆಬ್ರಿ, ಕಾರ್ಕಳ ತಾಲೂಕಿನಾದ್ಯಂತ ಸರಕಾರಿ ವಿವಿಧ ಇಲಾಖೆಗಳ ಕಡತ ವಿಲೇವಾರಿ ಅಭಿಯಾನವು ಫೆಬ್ರವರಿ 12 ರಿಂದ 19ರ ತನಕ ಆಚರಿಸಲಾಗುವುದೆಂದು ಇಂಧನ ಹಾಗೂ ಕನ್ನಡ ಮತ್ತು ಸಂಶ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ಹೇಳಿದರು.
ಕಾರ್ಕಳದ ವಿಕಾಸ ಸೇವಾ ಸಂಸ್ಥೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಯಂತ್ರವನ್ನು ಚುರುಕುಗೊಳಿಸುವುದು ಹಾಗೂ ಸರಕಾರಿ ಕಛೇರಿಯಲ್ಲಿ ಜನಸಾಮಾನ್ಯರು ಅಲೆದಾಟವನ್ನು ತಪ್ಪಿ ನ್ಯಾಯ ಒದಗಿಸುವುದು. ಮಧ್ಯವರ್ತಿಗಳ ಹಾಗೂ ಪ್ರಭಾವಿತರ ಹಾವಳಿಯನ್ನು ತಡೆಗಟ್ಟುವ ಮೂಲಕ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಅರ್ಜಿಗಳನ್ನು ಮೂರು ಹಂತಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಮೊದಲಹಂತದಲ್ಲಿ ಈಗಾಗಲೇ ಅರ್ಜೀಗಳನ್ನು ಸಲ್ಲಿಸಿ, ವಿವಿಧ ಕಾರಣಗಳಿಂದ ಕಡತ ವಲೇವಾರಿಯಾಗದೇ ಬಾಕಿ ಉಳಿದಿರುವುದನ್ನು ಮೊದಲ ಪ್ರಾಶಸ್ತ್ಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದೆಂದರು. ಎರಡನೇ ಹಂತದಲ್ಲಿ ಸರಕಾರಿ ಯೋಜನೆಗೆ ಸಂಬಂಧಿಸಿದ ಪಿಂಚಣಿ ಸೇರಿದಂತೆ ಇತರ ಅರ್ಜೀಗಳನ್ನು ವಿಲೇವಾರಿ ಮಾಡಲಾಗುವುದು. ಮೂರನೇ ಹಂತದಲ್ಲಿ ದೋಷ ಪೂರಿತವಾದ ಸ್ವತಃ ದಾಖಲೆಗಳನ್ನು ತಿದ್ದುಮಾಡಿ ವಿಲೇವಾರಿ ಮಾಡುವುದಾಗಿದೆ. ಸಪ್ತಾಹದ ಕಾಲಾವಧಿಯಲ್ಲಿ ಸರಕಾರಿ ವಿವಿಧ ಇಲಾಖಾಧಿಗಳ ಕಚೇರಿಯ ಮೇಜಿನ ಮೇಲೆ ಯಾವುದೇ ಕಡತಗಳು ಉಳಿಯಬಾರದು. ಪ್ರತಿ ಅರ್ಜಿಯನ್ನು ಪರಿಶೀಲಿಸಿ ಹಿಂಬರಹ ನೀಡಬೇಕು. ಆ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು, ನೌಕರರು ಗೈರುಹಾಜರಿಯಾಗಕೂಡದೆಂಬ ನಿರ್ದೇಶನವನ್ನು ನೀಡಿದರು.
ಫೆಬ್ರವರಿ 19ರಂದು ಬೃಹತ್ ಕಂದಾಯ ಮೇಳವು ಜರಗಲಿದ್ದು, ಮೇಳದ ಉದ್ಘಾಟನೆಯನ್ನು ಸಚಿವ ಆರ್ . ಅಶೋಕ್ಕುಮಾರ್ ಉದ್ಘಾಟಿಸುವ ಮೂಲಕ ಹೊಸ ಪರಂಪರೆಗೆ ಮೈಲುಗಲ್ಲು ಹಾಕಲಿದೆ ಎಂದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮಸ್ತ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅವಳಿ ಜಿಲ್ಲೆಗಳ ಬೇಡಿಕೆಯ ಮನವಿ ಸಲ್ಲಿಸಲಾಗುವುದು. ಆ ಮೂಲಕ ಬಜೆಟ್ನಲ್ಲಿ ಅವಳಿ ಜಿಲ್ಲೆಗೆ ಹೆಚ್ಚಿನ ಪ್ರಾಶ್ಯಸ್ತ್ಯ ನೀಡುವಂತೆ ಕೋರಲಾಗುವುದೆಂದರು.
ಕರೋನಾ ಸಂಕಷ್ಟ ಎದುರಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾದ ಕಾರ್ಕಳ ಉತ್ಸವವನ್ನು ಕಲಾವಿದರ ಸಮಯ ಗೊತ್ತು ಪಡಿಸಿ ದಿನಾಂಕವನ್ನು ಸದ್ಯದಲ್ಲಿ ಬಿಡುಗಡೆಮಾಡುವುದಾಗಿ ಇದೇ ಸಂದರ್ಭದಲ್ಲಿ ಸಚಿವ ವಿ.ಸುನೀಲ್ ಕುಮಾರ್ ವಿವರಿಸಿದರು.
ಈ ವೇಳೆ ತಹಶೀಲ್ದಾರ್ ಪುರಂದರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಶಶಿಧರ್, ಸಾಣೂರು ಪಿಡಿಓ ಮಧು ಉಪಸ್ಥಿತರಿದ್ದರು.