ಮಂಗಳೂರು, ಫೆ 05 (DaijiworldNews/HR): ಪಂಜಿಮೊಗರು ಎಂಬಲ್ಲಿ ಶನಿವಾರ ಪ್ರಾರ್ಥನಾ ಕೇಂದ್ರದ ಕಟ್ಟಡ, ಕಾಂಪೌಂಡ್ ಗೋಡೆ ಹಾಗೂ ಆಸ್ತಿಯ ಸುತ್ತಲಿನ ಮರಗಳನ್ನು ನೆಲಸಮಗೊಳಿಸಲಾಗಿದೆ.
ಶ್ರೀ ಸತ್ಯ ಕೋಡ್ದಬ್ಬು ಸೇವಾ ಸಮಿತಿಯು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಪ್ರಾರ್ಥನಾ ಕೇಂದ್ರದ ಆವರಣಕ್ಕೆ ನುಗ್ಗಿ ಕಟ್ಟಡ, ಕಾಂಪೌಂಡ್ ಗೋಡೆ, ಮರಗಳನ್ನು ನೆಲಸಮಗೊಳಿಸಿದೆ ಎಂದು ಆರೋಪಿಸಲಾಗಿದೆ.
ಶ್ರೀ ಸತ್ಯ ಕೋಡ್ದಬ್ಬು ಸೇವಾ ಸಮಿತಿ ವಿರುದ್ಧ ಸೈಂಟ್ ಆಂಟನಿ ಹೋಲಿ ಕ್ರಾಸ್ ಕಟ್ಟಡ ಸಮಿತಿ ಅಧ್ಯಕ್ಷ ಆಂಟನಿ ಪ್ರಕಾಶ್ ಲೋಬೋ, ಸಿಪ್ರಿಯನ್ ಡಿಸೋಜಾ, ಫ್ರಾನ್ಸಿಸ್ ಪಿಂಟೋ ಮತ್ತು ವಲೇರಿಯನ್ ಲೋಬೋ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ಆಸ್ತಿಗೆ ಅಕ್ರಮ ಪ್ರವೇಶ ಮತ್ತು ನಮ್ಮ ಕಟ್ಟಡಕ್ಕೆ ಹಾನಿಯಾಗದಂತೆ ತಡೆಯಲು ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಜಿಲ್ಲಾಧಿಕಾರಿ ಕೂಡ ತಡೆಯಾಜ್ಞೆ ನೀಡಿದ್ದಾರೆ. ಆದರೆ ಅಕ್ರಮವಾಗಿ ನಮ್ಮ ಆಸ್ತಿಗೆ ನುಗ್ಗಿ ನಮ್ಮ ಕಾಂಪೌಂಡ್ ಗೋಡೆ ಹಾಗೂ ನಮ್ಮ ಕಾಂಪೌಂಡ್ ಒಳಗಿದ್ದ ಮರಗಳನ್ನು ಕೆಡವಿದ್ದಾರೆ. ನಮ್ಮ ಆವರಣದೊಳಗೆ ಪ್ರಥಮ ವರ್ಷದ ನೇಮೋತ್ಸವವನ್ನು ಆಯೋಜಿಸಲು ಆಮಂತ್ರಣ ಪತ್ರಗಳನ್ನೂ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ನಾವು ಕಳೆದ 40 ವರ್ಷಗಳಿಂದ ಈ ಕಾಂಪೌಂಡ್ನಲ್ಲಿ ವಾಸಿಸುತ್ತಿದ್ದೇವೆ ಮತ್ತು ನಗರ ಪಾಲಿಕೆ ಅಧಿಕಾರಿಗಳು ನಮಗೆ ಡೋರ್ ನಂಬರ್ ನೀಡಿದ್ದಾರೆ. ಉಚಿತವಾಗಿ ಅಂಗನವಾಡಿ ನಡೆಸಲು ಸಹ ಅವಕಾಶ ನೀಡಿದ್ದೆವು. ನಾವು ಯಾವಾಗಲೂ ಶಾಂತಿಯ ಪರವಾಗಿದ್ದೇವೆ. ಆದರೆ ಶಾಂತಿ ಕದಡಲು ಬಯಸಿ ಈ ರೀತಿ ಮಾಡಿದ್ದಾರೆ. ಹೀಗಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಆಂಟನಿ ಪ್ರಕಾಶ್ ಲೋಬೋ ದೈಜಿವರ್ಲ್ಡ್ ಜೊತೆ ಮಾತನಾಡಿ, ಕೂಳೂರಿನ ಸಂತ ಆಂಟನಿ ಚರ್ಚ್ನ ಭಾಗವಾಗಿರುವ ಸಂತ ಆಂಟನಿ ಹೋಲಿ ಕ್ರಾಸ್ ಪ್ರಾರ್ಥನಾ ಕೇಂದ್ರವು ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಮಹಾನಗರ ಪಾಲಿಕೆ ವಿದ್ಯುತ್, ನೀರು ಒದಗಿಸಿದೆ. ಇಲ್ಲಿ ಮಕ್ಕಳಿಗಾಗಿ ಯಾವುದೇ ಶುಲ್ಕವಿಲ್ಲದೆ ಅಂಗನವಾಡಿಗೆ ಅವಕಾಶ ನೀಡಿದ್ದೆವು. ಸಿವಿಲ್ ವಿವಾದದ ವಿಷಯ ನ್ಯಾಯಾಲಯದಲ್ಲಿದೆ. ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ. ಇಲ್ಲಿ ದೈವಸ್ಥಾನ ನಿರ್ಮಿಸಲು ಸ್ಥಳೀಯ ಸಾರ್ವಜನಿಕರು ಮುಂದಾಗಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಪ್ರಾರ್ಥನಾ ಕೇಂದ್ರವನ್ನು ಕೆಡವಿದ್ದಾರೆ. ಎಲ್ಲ ಹಬ್ಬಗಳನ್ನೂ ಅಂಗನವಾಡಿ ಮಕ್ಕಳೊಂದಿಗೆ ಸೇರಿ ಆಚರಿಸುತ್ತಿದ್ದೆವು. ಇಂದು ಪ್ರಾರ್ಥನಾ ಕೇಂದ್ರ ನೆಲಸಮ ಮಾಡುವಾಗ ಹಲವಾರು ಕುರ್ಚಿಗಳು, ಎರಡು ಕಪಾಟುಗಳು, ಎಂಟು ಬೆಂಚುಗಳು, ಲೈಟ್ಗಳು, ಫ್ಯಾನ್ಗಳು ಮತ್ತು ವಾಷಿಂಗ್ ಮೆಷಿನ್ಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.