Karavali
ಕಾರ್ಕಳ: ಅಮೃತ ಯೋಜನೆಯಿಂದ ತಾಲೂಕು ಇನ್ನಷ್ಟು ಸುಂದರ, ಸ್ವಚ್ಚ
- Sat, Feb 05 2022 06:48:47 PM
-
ವಿಶೇಷ ವರದಿ: ಆರ್.ಬಿ.ಜಗದೀಶ
ಕಾರ್ಕಳ, ಫೆ 05 (DaijiworldNews/HR): ಅಮೃತ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಆಯ್ದ 75 ಸ್ಥಳೀಯ ಸಂಸ್ಥೆಗಳ ಪೈಕಿ ಕಾರ್ಕಳ ಪುರಸಭೆ ಒಂದಾಗಿದೆ. ಈ ಯೋಜನೆಯಡಿಯಲ್ಲಿ ರೂ.1 ಕೋಟಿ ಅನುದಾನವು ಬಿಡುಗಡೆಗೊಳ್ಳಲಿದೆ. ಆ ಮೂಲಕ ಸಮಗ್ರ ಘನ ತ್ಯಾಜ್ಯ ವಸ್ತು ನಿರ್ವಹಣೆ ಮಾಡುವುದರ ಜೊತೆಗೆ ಸ್ವಚ್ಛ ರಸ್ತೆ,ಸ್ವಚ್ಛ ಚರಂಡಿ, ಹಸಿರು ಪ್ರದೇಶಗಳು, ಶುಭ್ರ ಸಾರ್ವಜನಿಕ ಶೌಚಾಲಯ, ಧೂಳಿಲ್ಲದ ನಗರ ಸೃಜನೆ, ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣೆ, ನಗರ ಸೌಂದರೀಕರಣ,ಸುಧಾರಿತ ಸಾರ್ವಜನಿಕ ಪರಿಹಾರ ವ್ಯವಸ್ಥೆ, ಆಧುನಿಕ ಮಾದರಿ ಯಂತ್ರಗಳ ಲಭ್ಯತೆಗಳೊಂದಿಗೆ ನಗರದ ನೈರ್ಮಲ್ಯ ಕಾಪಾಡಲು ಅಗತ್ಯವಿರುವ ಸುಧಾರಣೆ ಜಾರಿಗೊಳ್ಳಲಿದೆ.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆಗಸ್ಟ್ 15ರ ಸ್ವಾತಂತ್ರೋತ್ಸವದ ಭಾಷಣದಲ್ಲಿ ಮುಖಮಂತ್ರಿ ಅಮೃತ ನಿರ್ಮಲ ನಗರ ಯೋಜನೆಯನ್ನು ಘೋಷಿಸಿದ್ದರು. ಆ ಮೂಲಕ ನಗರ/ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಅವಿಭಜಿತ ದ.ಕ:
ಕಾರ್ಕಳ ಪುರಸಭೆ, ಕುಮದಾಪುರ ಪುರಸಭೆ, ಬೈಂದೂರು ಪಟ್ಟಣಪಂಚಾಯತ್, ಬಮಟ್ವಾಳ ಪುರಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್, ಮೂಡುಬಿದಿರೆ ಪುರಸಭೆ, ಪುತ್ತೂರು ನಗರಸಭೆ ಇವುಗಳು ಅಮೃತ ಯೋಜನೆಗೆ ಆಯ್ಕೆಗೊಂಡಿರುವ ಸ್ಥಳೀಯಾಡಳಿತಗಳು.ಕ್ರಿಯಾ ಯೋಜನೆ:
2021-22ನೇ ಸಾಲಿನ ಅಮೃತ ನಿರ್ಮಲ ನಗರದ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಕರಿಯಕಲ್ಲು ಘನ ತ್ಯಾಜ್ಯ ಘಟಕದಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ಎರೆಹುಳು ಗೊಬ್ಬರ ಘಟಕ ನಿಮಾಣ ರೂ. 40 ಲಕ್ಷ. ಘನ ತ್ಯಾಜ್ಯ ಘಟಕಕ್ಕೆ ಕಂಪೌಂಡ್ ಗೋಡೆ ನಿರ್ಮಾಣ ರೂ. 22 ಲಕ್ಷ, ಘನತ್ಯಾಜ್ಯ ಘಟಕಕ್ಕೆ ಅಗ್ನಿಶಾಮಕ ವ್ಯವಸ್ಥೆ ಅಳವಡಿಕೆ ರೂ.15 ಲಕ್ಷ. ಒಳಚರಂಡಿ ವ್ಯವಸ್ಥೆಯನ್ನು ಶುಚಿಗೊಳಿಸುವ ಯಂತ್ರ ಖರೀದಿಗೆ ರೂ. 8.00 ಲಕ್ಷ. 4 ಸಾರ್ವಜನಿಕ ಮಹಿಳಾ ಶೌಚಾಲಯಗಳಲ್ಲಿ ನ್ಯಾಪ್ಕಲಿನ್ ವೆಂಟಿಂಗ್ ಯಂತ್ರ ಹಾಗೂ ನ್ಯಾಪ್ಕನ್ ಬರ್ನರ್ಗಳನ್ನು ಅಳವಡಿಸಲು ರೂ.5 ಲಕ್ಷ. ಅನಂತಶಯನ ವೃತ್ತದಲ್ಲಿ ಮಾಹಿತಿ ಶಿಕ್ಷಣ ಸಂವಹನ ನಡೆಸಲು ಎಲ್ಇಡಿ ಸಿಡ್ಪ್ಲೇಯಿ ಅಳವಡಿಸಲು ರೂ.5 ಲಕ್ಷ, ಆನೆಕೆರೆ ಪಾರ್ಕ್ ಎದುರುಗಡೆ ವೃತ್ತವನ್ನು ಅಭಿವೃದ್ಧಿಪಡಿಸಲು ಹಾಗೂ ಸ್ವಚ್ಚತೆ ಕುರಿತಂತೆ ಗೋಡೆ ಬರಹಕ್ಕೆ ರೂ. 3 ಲಕ್ಷ, ಜೋಡುರಸ್ತೆಯಿಂದ ಎಸ್ಬಿಐ ವರೆಗೆ ರಸ್ತೆ ಮಾರ್ಜಿನ್ಗಳಲ್ಲಿ ಗಿಡ ನೆಡುವುದಕ್ಕೆ ರೂ. 1.50 ಲಕ್ಷ, ಪೌರಕಾರ್ಮಿಕರ ಸುರಕ್ಷತೆಗೆ ಅಗತ್ಯ ಪರಿಕರಗಳ ಖರೀದಿಗೆ ರೂ. 50 ಸಾವಿರ ಮೊತ್ತವನ್ನು ಬಳಸುವುದು.ಕಾರ್ಕಳ ಪುರಸಭೆ:
1973ರಲ್ಲಿ ಸ್ಥಾಪನೆಗೊಂಡಿರುವ ಕಾರ್ಕಳ ಪುರಸಭೆ 5666.96 ಎಕರೆ ಪ್ರದೇಶ ವ್ಯಾಪ್ತಿ ಹೊಂದಿದೆ. 17 ಕೆರೆಗಳು, 9 ಸಾರ್ವಜನಿಕ ಬಾವಿಗಳು, 11 ಬೋರ್ವೆಲ್ಗಳಿವೆ. 8875 ಮನೆಗಳು,3207 ವಾಣಿಜ್ಯ ಮಳಿಗೆಗಳು, 12 ಕಲ್ಯಾಣ ಮಂಟಪ, ಧಾರ್ಮಿಕ ಕೇಂದ್ರಗಳು, 7 ನರ್ಸಿಂಗ್ ಹೋಂ, 1 ತಾಲೂಕು ಸರಕಾರಿ ಆಸ್ಪತ್ರೆ, 4 ಪಾರ್ಕ್, 5 ಸರಕಾರಿ ಶಾಲೆಗಳು, 7 ಕಾಲೇಜುಗಳು, 4 ಸ್ಮಶಾನ ಇತ್ಯಾದಿಗಳಿಂದ ಪ್ರತಿದಿನ ಸರಾಸರಿ 12.8 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರಲ್ಲಿ 8 ಟನ್ ಹಸಿ, 4.3 ಟನ್ ಒಣ, 5 ಕಟ್ಟಡ ತ್ಯಾಜ್ಯಗಳು ಉತ್ಪಾದನೆಯಾಗುತ್ತಿದೆ.ಪ್ರಶಸ್ತಿಗಳು:
ಸ್ವಚ್ಚತಾ ಕಾರ್ಯದಲ್ಲಿ 2015ರಲ್ಲಿ ಸ್ವಚ್ಚತೆಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. 2016ರಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಕುರಿತು ಪಶಸ್ತಿ ಲಭಿಸಿದೆ. ಆಗ ಪುರಸಭಾ ಮುಖ್ಯಾಧಿಕಾರಿಯಾಗಿ ರಾಯಪ್ಪ ಕಾರ್ಯನಿರ್ವಹಿಸಿರುವುದು ಗಮನಾರ್ಹ.ತ್ಯಾಜ್ಯ ನಿರ್ವಹಣೆಯೇ ಬಲುಕಷ್ಟ:
ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಪರಿಸರದಲ್ಲಿ 20 ಎಕರೆ ಜಾಗದಲ್ಲಿ ತ್ಯಾಜ್ಯ ನಿರ್ವಹಣೆಯ ಘಟಕ ಸ್ಥಾಪನೆಗೊಂಡಿದೆ. ಹಸಿ ತ್ಯಾಜ್ಯದಿಂದ ಎರೆಹುಳ ಗೊಬ್ಬರವಾಗುತ್ತಿದ್ದರೆ, ಒಣ ಕಸಗಳನ್ನು ಪ್ರತ್ಯೇಕಿಸುವ ವಿಭಾಗವೇ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಿಂದ ಪ್ಲಾಸ್ಟಿಕ್ ಪರಿಕರಗಳು, ಪ್ಲಾಸ್ಟಿಕ್ ಕವರ್, ಪ್ಯಾಡ್, ಚಪ್ಪಲಿ, ಕಬ್ಬಿಣ, ತರಗೆಲೆಗಳು, ಕಾಗದ, ಬಟ್ಟೆ ಇತ್ಯಾದಿ ಸೇರಿದೆ. ಅವುಗಳಲ್ಲಿ ಆಯ್ದ ತ್ಯಾಜ್ಯವನ್ನು ಗೊಬ್ಬರಕ್ಕೆ ಬಳಸಲಾಗುತ್ತದೆ.ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್:
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಎಸ್ಎಲ್ಆರ್ಎಮ್ ಮಾದರಿಯಲ್ಲಿ ಅನುಷ್ಠಾನಗೊಳಿಸುವ ಸದುದ್ದೇಶ ಕುಂದಾಪುರದ ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್ಗೆ ನೀಡಿದೆ. 2021 ನವಂಬರ್ 1ರಂದು ಅನ್ವಯವಾಗುವಂತೆ ಸಂಸ್ಥೆ ಹಾಗೂ ಕಾರ್ಕಳ ಪುರಸಭೆಯ ಪುರಸಭಾ ಮುಖ್ಯಾಧಿಕಾರಿಯ ನಡುವೆ ಕರಾರು ಸಹಿ ಮಾಡಲಾಗಿದೆ.
ಯಾರ್ಡಿಗೆ ತಂದ ಹಾಕಲಾಗುವ ಒಣ ತ್ಯಾಜ್ಯವನ್ನು ಘನ ತ್ಯಾಜ್ಯ ನಿಯಮ 2016 ಹಾಗೂ ಇತರ ನಿಯಮದಂತೆ ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಸ್ವಂತ, ಮಾನವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ವಿಂಗಡಿಸಿ ವಿಲೇವಾರಿ ಮಾಡತಕ್ಕದು. ಕೊನೆಯಲ್ಲಿ ಸಿಗುವ ದಹನಯೋಗ್ಯ ವಸ್ತುಗಳಾದ ಮ್ಲಟಿಲೇಯರ್ ಪ್ಲಾಸ್ಟಿಕ್,ಬಟ್ಟೆ, ಚಪ್ಪಲಿ ಇತ್ಯಾದಿಗಳನ್ನು ಪುರಸಭಾ ಯಂತ್ರಗಳನ್ನು ಉಪಯೋಗಿಸಿ ಬೈಲಿಂಗ್ ಮಾಡಿ ವಿಲೇವಾರಿ ಮಾಡುವುದು.ತ್ಯಾಜ್ಯಗಳಲ್ಲಿ ಯಾವುದೇ ಉತ್ಪಾದನಾ ಉದ್ದೇಶಕ್ಕೆ ಬಳಕ್ಕೆ ಬಳಸಲು ನೀಡುವ ಮತ್ತು ಮಾರಾಟ ಮಾಡುವ ಜವಾಬ್ದಾರಿ ಹಾಗೂ ಸಂಸ್ಥೆಯದಾಗಿರುತ್ತದೆ. ಡಂಪಿಂಗ್ ಯಾರ್ಡ್ನಲ್ಲಿ ನಿಯೋಜಿಸಿದ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಇಲಾಖೆಯ ಮಾರ್ಗಸೂಚಿಯಂತೆ ವೇತನ, ವಿಮೆ, ಆರೋಗ್ಯ ವಿಮೆ, ಭವಿಷ್ಯ ನಿಧಿ, ಕಾರ್ಮಿಕ ಕಲ್ಯಾಣ ತರಬೇತಿ ಇತ್ಯಾದಿಗಳನ್ನು ತನ್ನ ಸ್ವತಃ ಖರ್ಚಿನಲ್ಲಿ ನೀಡುವುದು. ಯಾವುದೇ ತಕರಾರುಗಳಿದ್ದಲ್ಲಿ ಅದಕ್ಕೆ ಪುರಸಭೆ ಹೊಣೆಯಾಗಿರುವುದಿಲ್ಲ. ಈಗಾಗಲೇ 10 ಮಂದಿ ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಕಾರ್ಮಿಕರು ಒಳಗೊಂಡಂತೆ 20 ಮಂದಿ ಕಾಯಂ ಪೌರ ಕಾರ್ಮಿಕರು, 18 ಮಂದಿ ಹೊರಗುತ್ತಿಗೆಯ ಆಧಾರದಲ್ಲಿ ಪೌರಕಾರ್ಮಿಕರು ಒಟ್ಟು 48 ಮಂದಿ ಸ್ವಚ್ಚತಾ ವಿಭಾಗದಲ್ಲಿ ದುಡಿಯುತ್ತಿದ್ದಾರೆ.
ಇನ್ನು ಖಾಯಂ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ದುಡ್ಡಿಯುತ್ತಿರುವ 38 ಪೌರಕಾರ್ಮಿಕರು ಪ್ರತಿದಿನ 7 ಗಂಟಗೆ ಪುರಸಭಾ ಕಚೇರಿಯ ಮುಂಭಾಗದಲ್ಲಿ ಹಾಜರಾಗ ತಕ್ಕದು. ಸಮವಸ್ತ್ರ, ಆರೋಗ್ಯ ದೃಷ್ಠಿಯಲ್ಲಿ ಮಾಸ್ಕ್, ಕೈಚೀಲ, ಕಾಲುಚೀಲ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಹಾಜರಾತಿ ಪಡೆದ ಪೌರಕಾರ್ಮಿಕರು ಸ್ವಚ್ಚತಾ ವಿಭಾಗದಲ್ಲಿ ದುಡಿಯುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಇದು ಪುರಸಭೆಯಲ್ಲಿ ಹೊಸ ರೂಢಿಯನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹೇಳಿದ್ದಾರೆ.