ಕುಂದಾಪುರ, ಫೆ 05 (DaijiworldNews/HR): ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಿಜಾಬ್ - ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಶನಿವಾರ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆದಿದ್ದು, ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಬರುವವರಿಗೆ ಕಾಲೇಜಿನ ಒಳಗೆ ಬರಲು ಅವಕಾಶವಿಲ್ಲ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಕುಂದಾಪುರ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿರ್ದೇಶನದಂತೆ ಸಮಿತಿಯ ಸದಸ್ಯರು ಹಾಗೂ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರ ಸಭೆ ನಡೆಯಿತು.
ಸಭೆಯ ಬಳಿಕ ಮಾತನಾಡಿದ ಸಮಿತಿಯ ಹಿರಿಯ ಸದಸ್ಯ ಮೋಹನ್ದಾಸ್ ಶೆಣೈ ಅವರು, ಶಾಸಕರ ಸಲಹೆಯಂತೆ, ಸರಕಾರದ ಆದೇಶವನ್ನು ಪಾಲಿಸಬೇಕು. ಇದು ಸರಕಾರಿ ಕಾಲೇಜು ಆಗಿರುವುದರಿಂದ ಇಲ್ಲಿ ಯಾವುದೇ ಧರ್ಮದ ವಿಚಾರಕ್ಕೆ ಅವಕಾಶವಿಲ್ಲ. ಒಳ್ಳೆಯ ಇತಿಹಾಸವಿರುವ ಕಾಲೇಜು ಆಗಿದ್ದು, ಮಾದರಿ ಶಿಕ್ಷಣ ಸಂಸ್ಥೆಯಾಗಿದೆ. ಆ ನಿಟ್ಟಿನಲ್ಲಿ ಸರ್ವಸಮ್ಮತ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕಾಲೇಜಿಗೆ ಬರುವವರು ಹಿಜಾಬ್ ಹಾಗೂ ಕೇಸರಿ ಶಾಲು ತೆಗೆದು ಒಳಬರಬಹುದು. ಇನ್ನು ಹಿಜಬ್ ಅಥವಾ ಶಾಲು ತೆಗೆದು ಬರಲು ಒಪ್ಪದವರಿಗೆ ಕಾಲೇಜಿನ ಗೇಟಿನ ಒಳಗೆ ಬರಲು ಅವಕಾಶವಿಲ್ಲ. ಇನ್ನು ಇದು ಕಾಲೇಜಿನ ಆಂತರಿಕ ಈ ವಿಚಾರವಾಗಿದ್ದು, ಇದರಲ್ಲಿ ಸಾರ್ವಜನಿಕರು ಅಥವಾ ಹೊರಗಿನ ಯಾರೇ ಆಗಲಿ ಭಾಗವಹಿಸಲು ಅವಕಾಶವಿಲ್ಲ ಎನ್ನುವ ಒಮ್ಮತದ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.
ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಸದಸ್ಯರಾದ ಮೋಹನ್ದಾಸ್ ಶೆಣೈ, ಸೀತಾರಾಮ ನಕ್ಕತ್ತಾಯ, ಅನಂತಕೃಷ್ಣ ಕೊಡ್ಗಿ, ರಾಜೀವ ಕೋಟ್ಯಾನ್, ನಾರಾಯಣ, ರಾಮಣ್ಣ, ದಿನಕರ ರಾವ್, ಶ್ರೀಪಾದ್ ಉಪಾಧ್ಯಾಯ, ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಉಪನ್ಯಾಸಕ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಹಿರಿಯ ಉಪನ್ಯಾಸಕ ಭುಜಂಗ ಶೆಟ್ಟಿ ಪಾಲ್ಗೊಂಡಿದ್ದರು.
ಕಳೆದ ಬುಧವಾರದಿಂದ 3 ದಿನಗಳ ಕಾಲ ಕಾಲೇಜಿನಲ್ಲಿ ಹಿಜಾಬ್, ಶಾಲು ವಿವಾದ ಆರಂಭಗೊಂಡಿದ್ದು, ಆ ಹಿನ್ನೆಲೆಯಲ್ಲಿ ಶನಿವಾರ ಕಾಲೇಜಿಗೆ ರಜೆ ನೀಡಲಾಗಿತ್ತು. ಫೆ. 7 ರಿಂದ (ಸೋಮವಾರ) ಕಾಲೇಜು ಅಭಿವೃದ್ಧಿ ಸಮಿತಿಯು ಕೈಗೊಂಡ ತೀರ್ಮಾನದಂತೆ ತರಗತಿಗಳು ನಡೆಯಲಿವೆ.