ಮಂಗಳೂರು, ಫೆ 05 (DaijiworldNews/KP): ಶಾಲೆ ಎನ್ನುವುದು ಸರಸ್ವತಿ ಮಂದಿರ, ಶಿಕ್ಷಣ ಸಂಸ್ಥೆಗಳ ನಿಯಮದ ಹಾಗೂ ಅನುಶಾಸನದಡಿಯಲ್ಲಿ ಶಿಕ್ಷಣವನ್ನು ಪಡೆಯುವುದು ವಿದ್ಯಾರ್ಥಿಗಳ ಧರ್ಮ. ಇದರೊಂದಿಗೆ ಬೇರೆ ಜಾತಿ, ಧರ್ಮವನ್ನು ಬೆರೆಸುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಮೊದಲು ಬೇಕಾಗಿರುವುದು ಶಿಕ್ಷಣ, ಶಾಲೆಯ ನಿಯಮಗಳನ್ನು ಒಪ್ಪಿ ಎಲ್ಲರೂ ಶಿಕ್ಷಣವನ್ನು ಪಡೆದುಕೊಳ್ಳಬೇಕು, ಯಾರಿಗೆ ಇಂತಹ ನಿಯಮಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲವೊ ಅಂತವರು ಬೇರೆ ದಾರಿ ನೋಡಿಕೊಳ್ಳಲಿ ಎಂದರು.
ಶಾಲೆಯ ನಿಯಮಗಳ ಜೊತೆ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು ಹೊರತು ಅದರೊಟ್ಟಿಗೆ ಜಾತಿ ಧರ್ಮವನ್ನು ಬೆರೆಸಿ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ, ಇನ್ನು ಕರಾವಳಿಯನ್ನು ತಾಲಿಬಾನ್ ಮಾಡಲು ನಾವು ಅವಕಾಶ ಕಲ್ಪಿಸುವುದಿಲ್ಲ, ನಮ್ಮ ಸರ್ಕಾರ ಈ ಘಟನೆಯ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಇನ್ನು ಟಿಪ್ಪು ಜಯಂತಿ, ಶಾದಿಭಾಗ್ಯದಂತಹ ಒಂದೇ ಧರ್ಮಕ್ಕೆ ಸೀಮಿತವಾಗಿದ್ದ ಯೋಜನೆಗಳ ರೂವಾರಿ ಸಿದ್ದರಾಮಯ್ಯ, ಈಗ ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಕಾಲದಲ್ಲಿ ಸಾಮರಸ್ಯ ಕದಡುವ ಎಷ್ಟು ಘಟನೆಗಳು ನಡೆದಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇನ್ನು ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ಮಂತ್ರಿ ಪದವಿಗೆ ಆಸೆ ಪಡುವುದು ತಪ್ಪಲ್ಲ, ಆದರೆ ಎಲ್ಲ ವಿಚಾರಗಳು ಮುಖ್ಯಮಂತ್ರಿಯವರಿಗೆ ಬಿಟ್ಟದ್ದು, ಮುಂದೆ ಸಂದರ್ಭ ಬಂದಾಗ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ಮಂತ್ರಿ ಮಂಡಲ ರಚನೆ ಮಾಡಲಾಗುವುದು ಎಂದರು.