Karavali
ಮಂಗಳೂರು: ಸಮಾನತೆಯ ಸಮವಸ್ತ್ರ, ಆಗದಿರಲಿ ಮತೀಯ ಸಂಘರ್ಷದ ಅಸ್ತ್ರ
- Sat, Feb 05 2022 12:36:51 AM
-
Santhosh M
ಮಂಗಳೂರು, ಫೆ. 05 (DaijiworldNews/SM): ಶಾಲೆ ಕಾಲೇಜುಗಳನ್ನು ಕಂಡಾಗ ಅಂದು ಓದಿದ್ದ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎನ್ನುವ ಧ್ಯೇಯೋಕ್ತಿ ನೆನೆದು ಮನಸ್ಸಿನಲ್ಲಿ ಪುನರಾವರ್ತನೆಯಾಗುತ್ತದೆ. ವಿದ್ಯೆ ಕಲಿಸುವ ಗುರು ಯಾವುದೇ ಸ್ವರೂಪ ಸ್ವಭಾವ ಹೊಂದಿದ್ದರೂ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಭಯ ಭಕ್ತಿ. ಗುರುಗಳಿಗೆ ಪ್ರತಿವಾದ ಮಂಡಿಸುವುದು ಬಿಡಿ, ಕೇಳಿದ ಪ್ರಶ್ನೆಯೊಂದಕ್ಕೆ ಸರಿಯುತ್ತರ ಮನಸ್ಸಿನಲ್ಲಿದ್ದರೂ ತುಟಿ ಬಿಚ್ಚಿ ಹೇಳುವ ಧೈರ್ಯ ವಿದ್ಯಾರ್ಥಿಗಳಲ್ಲಿರಲಿಲ್ಲ. ಪೆಟ್ಟು ತಿನ್ನದ ವಿದ್ಯಾರ್ಥಿಯಿಲ್ಲ. ಏಟು ನೀಡದ ಶಿಕ್ಷಕರಿಲ್ಲ. ಆದರೆ, ಇಂದು ಎಲ್ಲವೂ ಬದಲಾಗಿದೆ. ಶಿಕ್ಷಕರನ್ನೇ ಕಾನೂನಿನ ಚೌಕಟ್ಟಿನಡಿಗೊತ್ತಿ ನ್ಯಾಯದೇವತೆಯ ಮುಂದೆ ಗುರು ತಲೆ ತಗ್ಗಿಸಬೇಕು ಎನ್ನುವಷ್ಟರ ಮಟ್ಟಿಗೆ ವಿದ್ಯಾರ್ಥಿ ಸಮೂಹ ಬೆಳೆದು ನಿಂತಿದೆ.ಅಷ್ಟಕ್ಕೂ ಈ ಎಲ್ಲಾ ವಿಚಾರಗಳನ್ನು ನಾನು ಉಲ್ಲೇಖಿಸಲು ಕಾರಣ, ಇತ್ತೀಚಿನ ಒಂದುವಾರದಿಂದ ಕರಾವಳಿಯಲ್ಲಿ ಮೊಳಕೆಯೊಡೆದು ರಾಜ್ಯ, ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಿಜಬ್ ಧರಿಸುವ ವಿಚಾರಕ್ಕೆ ಉಂಟಾಗಿರುವ ಸಮರವನ್ನು ಗಮನಿಸಿದಾಗ ಈ ಹಿಂದಿನ ಶಿಕ್ಷಣದ ಸನ್ನಿವೇಶವನ್ನು ನೆನಪಿಸುತ್ತದೆ. ನಿತ್ಯ ಬೆಳವಣಿಗೆಗಳನ್ನು ಗಮನಿಸಿದ ಸಂದರ್ಭದಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ನಡುವಿನ ಗುರು ಶಿಷ್ಯರ ಸಂಬಂಧ ಎತ್ತ ಸಾಗುತ್ತಿದೆ? ಎನ್ನುವ ಪ್ರಶ್ನೆ ಕಾಡಲಾರಂಭಿಸುತ್ತದೆ. ಒಂದೆಡೆ ವಿದ್ಯಾರ್ಥಿನಿಯರು ಬೀದಿಯಲ್ಲಿದ್ದರೆ, ಅದೇ ವಿದ್ಯಾರ್ಥಿನಿಯರು ಅವರಿಗೆ ಒಂದಿಷ್ಟು ಸರಿದಾರಿ ತೋರಿದ ಗುರುಗಳಿಗೆ ಕಾನೂನಾತ್ಮಕವಾಗಿ ಪ್ರಶ್ನಿಸುವ ಹಂತಕ್ಕೆ ಬಂದಿದ್ದಾರೆ. ಅಂದರೆ, ಯಾವುದೋ ಒಂದು ಕಾಣದ ಕೈ ಇಲ್ಲಿ ಚಳಕ ತೋರುತ್ತಿದೆ. ವಿದ್ಯಾರ್ಥಿಗಳನ್ನೇ ಮುಂದಿಟ್ಟುಕೊಂಡು ತಮ್ಮ ಬೇಳೆಯನ್ನು ಬೆಯಿಸಿಕೊಳ್ಳುತ್ತಿವೆ.
ಗುರುಕುಲ ಶಿಕ್ಷಣ ಪದ್ಧತಿ ಇದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಅದೆಷ್ಟೋ ವರ್ಗದ ಜನ ಶಿಕ್ಷಣದಿಂದ ವಂಚಿತರಾಗಿದ್ದರು. ಕೇವಲ ಕೆಲವೇ ಕೆಲವು ಮೇಲ್ವರ್ಗದವರಿಗೆ ಶಿಕ್ಷಣ ದೊರೆಯುತ್ತಿತ್ತು. ಬಳಿಕ ಶಿಕ್ಷಣ ಕ್ಷೇತ್ರದಲ್ಲುಂಟಾದ ಕ್ರಾಂತಿಯಿಂದಾಗಿ ಅದೆಷ್ಟೋ ಕೋಟಿ ಜನತೆ ಸುಶಿಕ್ಷಿತರಾದರು. ಹಿಂದಿನಿಂದಲೂ ಇದ್ದಂತ ಹಲವು ಮೂಢನಂಬಿಕೆಗಳಿಂದ ದೂರ ಸರಿದರು. ಕೆಲವೊಂದು ಧಾರ್ಮಿಕ ಆಚರಣೆಗಳಿಗೆ ಬ್ರೇಕ್ ಬೀಳ ತೊಡಗಿತು. ಅಂದಕಾರದ ನಂಬಿಕೆ ಆಚರಣೆಗೆ ಮುಕ್ತಿ ನೀಡಲಾಯಿತು. ಪ್ರಸ್ತುತ ಬಹುತೇಕ ಎಲ್ಲರೂ ಸುಶಿಕ್ಷಿತರಾಗಿದ್ದರೂ, ಎಲ್ಲೋ ಅಜ್ಞಾನದ ಕತ್ತಲನ್ನು ಹೋಗಲಾಡಿಸಲು ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಪ್ರಜಾಪ್ರಭುತ್ವದಲ್ಲಿರುವ ದೇಗುಲಗಳ ಪೈಕಿ ವಿದ್ಯಾ ದೇಗುಲಕ್ಕೂ ಮತೀಯತೆ ಅಂಟಿಕೊಂಡಿದೆ. ವಿವಿಧ ಮನೆತನ, ಬೇರೆ ಬೇರೆ ಜಾತಿ, ಧರ್ಮ, ವೈವಿಧ್ಯಪೂರ್ಣ ಆಚಾರ, ಆಚರಣೆ, ಬಡವ, ಶ್ರೀಮಂತ ಹೀಗೆ ಹತ್ತು ಹಲವು ವರ್ಗಗಳಿದ್ದರೂ ಸರಸ್ವತಿಯನ್ನು ವರಿಸಿಕೊಳ್ಳಲು ಬರುವ ವೇಳೆ ಎಲ್ಲಾ ಭಿನ್ನತೆಗಳನ್ನು ಮರೆತು ಭಾರತಾಂಬೆಯ ಮಕ್ಕಳೆಂಬುವುದನ್ನು ಮಾತ್ರ ಮನದಲ್ಲಿರಿಸಿ ಶಿಕ್ಷಣ ಪಡೆಯಲು ಅವಕಾಶ ಸಂವಿಧಾನ ನೀಡಿದೆ. ತಮ್ಮವರಿಂದಲೇ ಸಮಾನತೆ, ಸ್ವಾತಂತ್ರ್ಯದಿಂದ ವಂಚಿತರಾದವರು ಇಂದು ಇತರರನ್ನು ಪ್ರಶ್ನಿಸುವ ಹಂತಕ್ಕೆ ತಲುಪಿದೆ.
ಸಮಾನತೆಗಾಗಿ ಸಮವಸ್ತ್ರ ನೀತಿ:
ಶಿಕ್ಷಣದ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಬಡವ, ಶ್ರೀಮಂತ, ಜಾತಿ ಧರ್ಮದ ಅಂತರದ ನೆನಪಾಗದೇ ಇರಲು ಪ್ರಮುಖ ಅಸ್ತ್ರವೇ ಸಮವಸ್ತ್ರ. ಎಲ್ಲರನ್ನು ಸಮಾರನ್ನಾಗಿಸಿದೆ. ಆದರೆ, ಅದರಲ್ಲೂ ಮತ್ತೆ ವಿಭಿನ್ನತೆ ಬೇಕೆನ್ನುವುದು, ಧಾರ್ಮಿಕ ಆಚರಣೆಗೆ ಅವಕಾಶ ನೀಡಬೇಕೆನ್ನುವುದಾದರೆ, ಸುಶಿಕ್ಷಿತರಾಗಿಯೂ ಅನಕ್ಷರಸ್ಥರಾದೆವು ಎಂಬಂತಹ ನಿರ್ಧಾರಕ್ಕೆ ಬಂದಂತೆ. ಶಿಕ್ಷಣ ವ್ಯವಸ್ಥೆಯೊಳಗೆ ಧಾರ್ಮಿಕತೆಯನ್ನು ತರುವುದು ಎಷ್ಟು ಸರಿ ಎನ್ನುವುದು ಸದ್ಯ ಹುಟ್ಟಿಕೊಂಡಿರುವ ಪ್ರಶ್ನೆ?ವಿದ್ಯಾದೇಗುಲದಲ್ಲಿ ಧಾರ್ಮಿಕತೆ ಅವಕಾಶ ಸಲ್ಲದು!
ಸದ್ಯ ಹಿಜಬ್ ವಿವಾದ ಹಲವು ರೀತಿಯಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗುತ್ತಿದೆ. ದಿನದಿಂದ ದಿನಕ್ಕೆ ಕಾಲೇಜಿನಿಂದ ಕಾಲೇಜಿಗೆ ವಿಸ್ತರಿಸುತ್ತಿದೆ. ಅಷ್ಟಿದ್ದರೂ ಇದಕ್ಕೆ ಪೂರ್ಣ ವಿರಾಮ ನೀಡುವವರಿಲ್ಲದಂತಾಗಿದೆ. ಈ ನಡುವೆ ಗೃಹ ಸಚಿವರು ಸೇರಿದಂತೆ ರಾಜ್ಯದ ಕೆಲಸಚಿವರು ತಮ್ಮ ನಿರ್ಧಾರ ಪ್ರಕಟಿಸಿದ್ದು, ತರಗತಿಯೊಳಗೆ ಹಿಜಾಬ್, ಕೇಸರಿ ಶಾಲು ಯಾವುದನ್ನೂ ಧರಿಸುವಂತಿಲ್ಲ ಎನ್ನುವ ಸ್ಪಷ್ಟ ನಿದರ್ಶನವನ್ನು ನೀಡಿದ್ದಾರೆ. ಸರಕಾರದ ಮಟ್ಟಿಗೆ ಇದೊಂದು ಉತ್ತಮ ನಿರ್ಧಾರ. ಈ ಆದೇಶವನ್ನು ಸರಕಾರ ಕಟ್ಟುನಿಟ್ಟಾಗಿ ರಾಜ್ಯದೆಲ್ಲೆಡೆ ಜಾರಿಗೆ ತರಬೇಕಾಗಿದೆ. ಆ ಮೂಲಕ ಶಿಕ್ಷಣಕ್ಕೆ ಅಂಟಿಕೊಂಡು ಅಡ್ಡಿಯಾಗುತ್ತಿರುವ ಧಾರ್ಮಿಕ ವಿಚಾರಗಳಿಗೆ ತೆರೆ ಬಿದ್ದಂತಾಗುತ್ತದೆ. ವಿದ್ಯಾರ್ಥಿಗಳು ಪರಸ್ಪರ ಪ್ರೀತಿ, ಸಹೋದರತೆ, ಸಹಬಾಳ್ವೆ, ಸಮಾನತೆಯಿಂದಿರಲು ಪೂರಕವೆಣಿಸಲಿದೆ.ಸಂಘಟನೆಗಳ ಕುತಂತ್ರಕ್ಕೆ ವಿದ್ಯಾರ್ಥಿಗಳು ಬಲಿಪಶು:
ವಿದ್ಯಾರ್ಥಿಗಳು, ಅವರ ಪೋಷಕರ ಮನಸ್ಸಿನಲ್ಲಿ ವೈಶಮ್ಯದ ವಿಷಬೀಜ ಬಿತ್ತುವ ಕಾಯಕವನ್ನು ಕೆಲವು ಸಂಘಟನೆಗಳು ಸೈಲೆಂಟಾಗಿ ಮಾಡಿಮುಗಿಸಿವೆ. ಉರಿಯುವ ಬೆಂಕಿಗೆ ತುಪ್ಪ ಸುರಿದು ಅಂದ ನೋಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ, ಇದು ನೇರ ಪರಿಣಾಮ ಬೀರಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ. ಈಗಾಗಲೇ ಹಲವು ದಿನದ ಪಾಠಪ್ರವಚನಗಳಿಂದ ಹಠ ಹಿಡಿದ ಕೆಲವು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಅವರೇ ಹೇಳಿದಂತೆ ತರಗತಿಗಳಿಗೆ ಹಾಜರಾಗದಿದ್ದಲ್ಲಿ ನಮಗೆ ಪಾಠ ಪ್ರವಚನ ಅರ್ಥವಾಗುವುದಿಲ್ಲ ಎನ್ನುವುದು. ಆದರೆ, ವಿವೇಚನೆಯಿಂದ ಉಂಟಾದ ಪ್ರಮಾದಕ್ಕೆ ಎಂದೆಂದೂ ಕ್ಷಮೆ ಇಲ್ಲ. ಮುಂಬರುವ ಪರೀಕ್ಷೆಗಳ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಸಂದರ್ಭದಲ್ಲೂ ಕೆಲವು ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ಕ್ಲಿಷ್ಟಕರ ಸನ್ನಿವೇಶವೂ ಎದುರಾಗಬಹುದು. ಸದ್ಯದ ಸನ್ನಿವೇಶಗಳನ್ನು ಗಮನಿಸಿಕೊಂಡು ಮಾನಸಿಕವಾಗಿ ಕುಗ್ಗುವ ಸಂಭವ. ಇವೆಲ್ಲವೂ ವಿದ್ಯಾರ್ಥಿ ಅನುಭವಿಸಬೇಕಾಗಿರುವುದು. ಆದರೆ, ದೂರದಲ್ಲಿ ನಿಂತು ಕಿವಿಹಿಂಡುವ ಸಂಘಟನೆಯವರಿಗೆ ಮಾತ್ರ ಇಲ್ಲಿ ಯಾವುದೇ ಗೊಡವಿಲ್ಲ.ಸರಕಾರದಿಂದ ತಕ್ಷಣಕ್ಕೆ ಸ್ಪಷ್ಟ ಆದೇಶವಾಗಬೇಕಿದೆ
ನಾವು ಈ ಹಿಂದಿನಿಂದಲೂ ಹಿಜಬ್ ಧರಿಸುತ್ತಿದ್ದೆವು. ನಮ್ಮ ಹಿರಿಯರು ಕೂಡ ಹಿಜಬ್ ಧರಿಸಿ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದರು. ನಮಗೂ ಈ ಸ್ವಾತಂತ್ರ್ಯವಿದೆ. ಇಷ್ಟು ದಿನ ಇಲ್ಲದ ವಿವಾದ ಈಗ ಯಾಕೆ ಹುಟ್ಟುಹಾಕಿದಿರಿ. ನಮಗೆ ಹಿಜಬ್ ಬೇಕು, ಶಿಕ್ಷಣವೂ ಬೇಕು ಎನ್ನುವುದು ಸದ್ಯ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರ ವಾದ. ಇದಕ್ಕಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ವಿವಾದ ಹುಟ್ಟಿಕೊಳ್ಳಲು ಕಾರಣ ಹುಡುಕುವ ಬದಲು ಇದಕ್ಕೊಂಡು ತಾರ್ಕಿಕ ಅಂತ್ಯ ಬೇಕಾಗಿದೆ. ಸರಕಾರ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಎರಡೂ ಸಮುದಾಯವನ್ನು ಓಲೈಸುವುದು ಕಷ್ಟ ಸಾಧ್ಯ. ಆದರೆ, ತನ್ನ ನಿರ್ಧಾರ ಸ್ಪಷ್ಟ ಹಾಗೂ ನಿಖರವಾಗಿರಬೇಕು. ಎಳ್ಳಷ್ಟು ಹಿಂದೆ ಸರಿಯದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಶೀಘ್ರದಲ್ಲೇ ಬುಗಿಲೆದ್ದಿರುವ ಮತೀಯವಾದದ ಕೆಂಡವನ್ನಾರಿಸಬೇಕಾಗಿದೆ.