ಉಡುಪಿ, ಫೆ. 04 (DaijiworldNews/SM): ಹಿಜಬ್ ವಿವಾದ ದಿನಕ್ಕೊಂದರಂತೆ ತಿರುವು ಪಡೆಯುತ್ತಿದ್ದು, ಮತ್ತೊಮ್ಮೆ ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನಿಯಮಕ್ಕೆ ಬದ್ಧರಾಗುವುದಾದರೆ ಬರಲಿ, ಇಲ್ಲದಿದ್ದರೆ ಮನೆಯಲ್ಲಿರಲಿ. ನಮ್ಮದು ಇದೇ ಸ್ಪಷ್ಟ ನಿಲುವು ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಿಜಾಬ್ ವಿಚಾರದಲ್ಲಿ ತಾನು ಸಂವಿಧಾನ ಬದ್ದವಾಗಿ ನಡೆಯುತ್ತಿದ್ದೇನೆ ಎಂದು ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮ 1995 ಬಗೆಗಿರುವ ಪ್ರತಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಘುಪತಿ ಭಟ್ ಹಂಚಿಕೊಂಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಘುಪತಿ ಭಟ್ ಬಗ್ಗೆ ವ್ಯಂಗ್ಯವಾಡಿದ್ದು, ಇದೇ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಭಟ್, ಶೈಕ್ಷಣಿಕ ವಾತಾವರಣದಲ್ಲಿ ತಮಗೆ ಇಷ್ಟ ಬಂದಂತಿರಲು ಅದೇನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ. ಮಾಡಿದ್ದನ್ನೆಲ್ಲ ಒಪ್ಪಲು ನಾವು ರಾಹುಲ್ ಗಾಂಧಿಯೂ ಅಲ್ಲ ಎಂದು ಬರೆದಿದ್ದಾರೆ.
ತಾನೊಬ್ಬ ಲಾಯರ್ ಎಂದು ಬೊಗಳೆ ಬಿಡುವವರು ಸಮವಸ್ತ್ರದ ಕುರಿತು ಶಿಕ್ಷಣ ಇಲಾಖೆಯ ನಿಯಮ ಓದಿಲ್ಲವೇಕೆ? ಸಮವಸ್ತ್ರದ ಕುರಿತು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಶಿಕ್ಷಣ ಇಲಾಖೆಯ ನಿಯಮದಲ್ಲಿ ಏನಿದೆಯೋ ಅದನ್ನು ನಾನು ಹೇಳಿದ್ದೇನೆ. ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದಿದ್ದಾರೆ.