ಉಡುಪಿ, ಫೆ. 04 (DaijiworldNews/SM): ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಹಿಜಾಬ್ ವರ್ಸಸ್ ಕೇಸರಿ ವಿವಾದ ತಾರಕಕ್ಕೇರುತ್ತಲೇ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ರಘುಪತಿ ಭಟ್ ನಡುವಿನ ಮಾತಿನ ಚಾಟಿ ಏಟು ಸೋಶಿಯಲ್ ಮಿಡೀಯಾದಲ್ಲಿ ಬಿರುಸಾಗಿ ನಡೆಯುತ್ತಿದೆ.
ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ಎಂಬ ಸಿದ್ದರಾಮಯ್ಯನವರ ಪ್ರಶ್ನೆಗೆ ಶಾಸಕ ರಘುಪತಿ ಭಟ್ ಫೇಸ್ ಬುಕ್ ಮುಖಾಂತರ ತಿರುಗೇಟು ನೀಡಿದ್ದಾರೆ.
ರಘುಪತಿ ಭಟ್ ಯಾರು ಎಂದು ಪ್ರಶ್ನಿಸುವ ಸಿದ್ದರಾಮಯ್ಯನವರೇ, ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಶಿಕ್ಷಣದಲ್ಲಿ ಮೂಲಭೂತವಾದವನ್ನು ತುರುಕಿಸುವ ಉದ್ಧೇಶದಿಂದ ಸಿದ್ದರಾಮಯ್ಯ ಅವರು ಹಿಜಬ್ ಮೂಲಭೂತ ಹಕ್ಕು ಎಂಬ ವಾದ ಮಂಡಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.