ಕಾಸರಗೋಡು, ಫೆ. 04 (DaijiworldNews/SM): ಮೃತಪಟ್ಟ ಕಾರ್ಮಿಕನ ದೇಹವನ್ನು ಮಾಲಕ ಹಾಗೂ ಇತರ ಕಾರ್ಮಿಕರು ಹೊಂಡದಲ್ಲಿ ಹೂತು ಹಾಕಿದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಬಾಯಾರ್ ಸಮೀಪದ ಕನಿಯಾಲ ಸುದೆಂಬಳ ಎಂಬಲ್ಲಿ ನಡೆದಿದ್ದು, ತಡವಾಗಿ ಕೃತ್ಯ ಬೆಳಕಿಗೆ ಬಂದಿದೆ.
ಜಾರ್ಖಂಡ್ ಮೂಲದ ಸೀಬಜ್(35) ಮೃತ ಪಟ್ಟ ಕಾರ್ಮಿಕ. ಕನಿಯಾಲದ ತೋಟದ ಕಾರ್ಮಿಕರಾಗಿದ್ದರು. ಒಂದೂವರೆ ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. 2021ರ ಡಿಸೆಂಬರ್ 21 ರಂದು ಘಟನೆ ನಡೆದಿದೆ. ಸೀಬತ್ ನ ಸಂಬಂಧಿಕ ಸಂಜಯ್ ಮತ್ತು ತೋಟದ ಮಾಲೀಕನನ್ನು ಪೊಲೀಸರು ವಿಚಾರಿಸಿದಾಗ ಕೃತ್ಯ ಹೊರ ಬಿದ್ದಿದೆ. ಮೃತಪಟ್ಟ ಕಾರ್ಮಿಕನನ್ನು ಜೊತೆಗಿದ್ದ ಇತರ ಕಾರ್ಮಿಕರು ಹಾಗೂ ಮಾಲಕ ಸೇರಿ ತೋಟದ ಕೆರೆಯ ಬದಿ ಹೊಂಡ ತೆಗೆದು ಹೂತು ಹಾಕಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಸಾವು ಹೇಗೆ ನಡೆದಿತ್ತು ಎಂಬ ಬಗ್ಗೆ ಏನೂ ಸ್ಪಷ್ಟ ಗೊಂಡಿಲ್ಲ.
ಮನೆ ಮಾಲಕ ಹಾಗೂ ಸೀಬಜ್ ನ ಸಂಬಂಧ ಸಂಜಯ್ ನೀಡಿರುವ ತದ್ವಿರುದ್ದ ಹೇಳಿಕೆ ಪೊಲೀಸರಲ್ಲಿ ಗೊಂದಲ ಉಂಟುಮಾಡಿದೆ. ಸೀಬಜ್ ಡಿ.20 ರಂದು ಊರಿಗೆ ತೆರಳಿ ಮರಳಿದ್ದು, 21 ರಿಂದ ನಾಪತ್ತೆಯಾಗಿದ್ದರು. ಶೋಧ ನಡೆಸಿದಾಗ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿತ್ತು ಎಂದು ಸಂಜಯ್ ಹೇಳಿಕೆ ನೀಡಿದ್ದಾನೆ. ಆದರೆ ತೋಟದ ಬದಿಯ ಮರದ ಗೆಲ್ಲು ಕಡಿ ಯುತ್ತಿದ್ದಾಗ ಶಾಕ್ ತಗುಲಿ ಬಿದ್ದು ಮೃತಪಟ್ಟಿರುವುದಾಗಿ ಮಾಲಕ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಮೃತಪಟ್ಟ ಕಾರ್ಮಿಕನ ಮೃತ ದೇಹವನ್ನು ಯಾರಿಗೂ ತಿಳಿಯದಂತೆ ಸಂಜಯ್, ಮಾಲಕ ಸೇರಿದಂತೆ 18 ಮಂದಿ ಸೇರಿ ಹೂತು ಹಾಕಿರುವುದಾಗಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಕಾರ್ಮಿಕನನ್ನು ಹೂತು ಹಾಕಿರುವ ಬಗ್ಗೆ ದಿನಗಳ ಹಿಂದೆ ಪರಿಸರದ ಕೆಲವರಿಗೆ ಮಾಹಿತಿ ಲಭಿಸಿದ್ದು, ಸಂಶಯಗೊಂಡ ಕೆಲವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ತೋಟದ ಮಾಲೀಕ ಮತ್ತು ಸಂಜಯ್ ನನ್ನು ಪ್ರಶ್ನಿಸಿದ್ದರು. ಇಬ್ಬರೂ ತದ್ವಿರುದ್ದ ಹೇಳಿಕೆ ನೀಡಿದ್ದು, ಕೊನೆಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಕೃತ್ಯ ನಡೆಸಿ ರುವುದನ್ನು ಒಪ್ಪಿಕೊಂಡಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಆಗಮಿಸಿದ ಬಳಿಕ ಮೃತ ದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಶ್ವಾನ ದಳ ಸ್ಥಳಕ್ಕಾಮಿಸಿ ಮಾಹಿತಿ ಕಲೆ ಹಾಕಿದೆ. ಮೃತ ದೇಹ ಹೂತು ಹಾಕಲಾದ ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.