ಬೆಳ್ತಂಗಡಿ, ಫೆ 04 (DaijiworldNews/HR): ಮರೋಡಿ ಗ್ರಾಮದ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವ ಫೆ.19 ಮತ್ತು 20ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯಲ್ಲಿ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಶುಕ್ರವಾರ ಬಿಡುಗಡೆ ಮಾಡಿದರು.
ಮರೋಡಿ ದೇರಾಜೆಬೆಟ್ಟದ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು 250 ವರ್ಷಗಳ ಹಿಂದೆ ಪಾಳುಬಿದ್ದಿತ್ತು, ಸುಮಾರು 38 ವರ್ಷಗಳ ಹಿಂದೆ ಇಲ್ಲಿ ನೇಮೋತ್ಸವ ನಡೆಸಿರುವ ವಿಚಾರ ಊರ ಕೆಲವು ಹಿರಿಯರಿಗೆ ತಿಳಿದಿದ್ದು ಇದರ ಕುರುಹುಗಳು ಕ್ಷೇತ್ರದಲ್ಲಿ ಪತ್ತೆಯಾಗಿತ್ತು. ಇದೀಗ ಕ್ಷೇತ್ರವನ್ನು ಊರ ಪರವೂರ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಲಾಗಿದ್ದು ಫೆಬ್ರವರಿ 19 ಹಾಗೂ 20 ರಂದು ಶ್ರೀ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ 108 ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಹಾಗೂ ನೇಮೋತ್ಸವವು ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭ ಆಡಳಿತ ಸಮಿತಿಯ ಅಧ್ಯಕ್ಷ ಹೇಮರಾಜ್.ಕೆ. ಬೆಳ್ಳಿಬೀಡು, ಕಾರ್ಯದರ್ಶಿ ನಾರಾಯಣ ಪೂಜಾರಿ ಉಚ್ಚೂರು, ಸುರೇಂದ್ರ ಬಳ್ಳಾಲ್ ಮಲ್ಲಾರ ಬೀಡು, ಸುದರ್ಶನ್ ಜೈನ್ ಪಾಂಡಿಬೆಟ್ಟು ಗುತ್ತು, ಜಿನೇಂದ್ರ ಜೈನ್ ಹರಂಬೆಟ್ಟು ಗುತ್ತು, ಜಯವರ್ಮ ಬುಣ್ಣು ಕುಕ್ಕೆರಬೆಟ್ಟು ಗುತ್ತು,ಆದಿತ್ಯ ಪಿ.ಕೆ ಮತ್ತೊಟ್ಟು, ವಿಜಯ ಬಂಗ, ವಿಶುಕುಮಾರ್ ಜೈನ್, ಇನ್ನಿತರರು ಉಪಸ್ಥಿತರಿದ್ದರು.