ಉಪ್ಪಿನಂಗಡಿ, ಫೆ 04 (DaijiworldNews/HR): ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಮುಸ್ಲಿಂ ಸಮುದಾಯದ ಮನೆಯಲ್ಲಿ ಹಿಂದೂ ಸಮುದಾಯದ ಯುವತಿಯನ್ನು ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂಬ ಮಾಹಿತಿಯಿಂದಾಗಿ ತಡ ರಾತ್ರಿ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿಯನ್ನು ವಶಕ್ಕೆ ಪಡೆದು ಆಕೆಯ ಹೆತ್ತವರ ಮನೆಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಪಿಲಿಗೂಡಿನ ಸಂಶುದ್ದೀನ್ ಎಂಬಾತನ ಮನೆಯಲ್ಲಿ ಯುವತಿ ಅಕ್ರಮ ವಶದಲ್ಲಿದ್ದಾಳೆಂಬ ಮಾಹಿತಿಯನ್ನು ಸ್ಥಳೀಯ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಯುವತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ, ನಾನು ಸ್ವ ಇಚ್ಚೆಯಿಂದ ನನ್ನ ಗೆಳತಿ ಮನೆಗೆ ಬಂದಿರುವುದಾಗಿ ತಿಳಿಸಿದ ಕಾರಣಕ್ಕೆ ಆಕೆಯಿಂದ ಹೇಳಿಕೆ ಪಡೆದು ಆಕೆಯ ಹೆತ್ತವರ ಮನೆಗೆ ಕಳುಹಿಸಿಕೊಡಲಾಗಿತ್ತು.
ಬಾಲಕಿ ಮೂಲತಃ ಚಿಕ್ಕಮಗಳೂರಿನವಳು ಎನ್ನಲಾಗಿದೆ. ಸಂಶುದ್ದೀನ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ರಕ್ಷಿತ್, ಯಶೋಧರ, ಕಾರ್ತಿಕ್, ಹರೀಶ್, ಬಾಬು, ದೇವರಾಜ್ ಮತ್ತಿತರರು ತನ್ನ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ತನ್ನಲ್ಲಿ ಹಾಗೂ ತನ್ನ ದೊಡ್ಡಮ್ಮನಲ್ಲಿ ನಿಮ್ಮ ಮನೆಯಲ್ಲಿ ಯಾರಾದರೂ ಹಿಂದೂ ಯುವತಿ ಇದ್ದಾರಾ ಎಂದು ಪ್ರಶ್ನಿಸಿದ್ದು, ತಾನು ತನ್ನ ಪತ್ನಿಯ ಗೆಳತಿ ಮನೆಯಲ್ಲಿ ಇರುವುದನ್ನು ತಿಳಿಸಿದಾಗ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ್ದಾರೆ.
ಇನ್ನು ದೂರಿನನ್ವಯ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.