ಬಂಟ್ವಾಳ, ಫೆ 04 (DaijiworldNews/HR): ಸಾಲೆತ್ತೂರಿನಲ್ಲಿ ಅನ್ಯ ಧರ್ಮದ ಯುವಕರ ತಂಡವೊಂದು ಮದುವೆ ಸಂಭ್ರಮದಲ್ಲಿ ತುಳುನಾಡಿನ ಕೊರಗಜ್ಜನ ವೇಷ ಧರಿಸಿ ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ವರ ಉಮರುಲ್ ಬಾಷಿತ್ ನನ್ನು ಕೇರಳದ ಕೊಚ್ಚಿಯ ನಡುಂಬನ್ ಶೇರಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳದ ಕೊಚ್ಚಿಯ ನಡುಂಬನ್ ಶೇರಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಆರೋಪಿಯನ್ನು ಇದೀಗ ವಿಟ್ಲ ಠಾಣಾ ಪೊಲೀಸರು ಕರೆದುಕೊಂಡು ಬರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಪ್ಪಳದ ಯುವಕನ ಜೊತೆ ನಡೆದಿದ್ದ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆಯಲ್ಲಿ ವಧುವಿನ ಮನೆಗೆ ವರನ ಸ್ನೇಹಿತ ಬಳಗ ಆಗಮಿಸಿದ್ದು, ಈ ವೇಳೆ ವರ ಕೊರಗಜ್ಜರನ್ನು ಹೋಲುವ ವೇಷ ಭೂಷಣ ಧರಿಸಿದ್ದರು. ಈ ವೇಳೆ ಮದುಮಗ ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದ ಆರೋಪ ವ್ಯಕ್ತವಾಗಿ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಈ ಸಂಬಂಧ ವಿಟ್ಲ ಪಡ್ನೂರು ಗ್ರಾಮದ ವ್ಯಕ್ತಿಯೊಬ್ಬರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಿಂದೂಗಳ ಧಾರ್ಮಿಕ ಭಾವನೆಗೆ ಅಪಮಾನಗೊಳಿಸಿ ಧಕ್ಕೆ ತಂದಿದ್ದ, ವರ,ವಧುವಿನ ಮನೆಯವರು ಹಾಗೂ ಕೃತ್ಯದಲ್ಲಿ ತೊಡಗಿರುವ ವರನ ಸ್ನೇಹಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇನ್ನು ಮದುಮಗ ಉಮರುಲ್ ಭಾಷಿತ್ ನಿರೀಕ್ಷಣಾ ಜಾಮೀನಿಗಾಗಿ ಮಂಗಳೂರು 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದರು. ಆದರೆ ಉಮರುಲ್ ಬಾಷಿತ್ ರವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾ ಮಾಡಿತ್ತು.