ಕುಂದಾಪುರ, ಫೆ. 03 (DaijiworldNews/SM): ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಭಾವಚಿತ್ರ ತೆಗೆಸಿದ ರಾಯಚೂರು ನ್ಯಾಯಾಧೀಶರ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಿನ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ, ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಗಣರಾಜ್ಯೋತ್ಸವ ದಿನ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳಿ ಮಹಾನಾಯಕರಿಗೆ ಅಪಮಾನ ಮಾಡಿದ್ದಾರೆ. ಸಂವಿಧಾನವನ್ನು ಒಪ್ಪಿ ಸ್ವೀಕರಿಸಿದ ನ್ಯಾಯಾಧೀಶರು ಹೀಗೆ ವರ್ತಿಸುವುದು ಕೇವಲ ದಲಿತ ಸಮಾಜಕ್ಕೆ ಅಲ್ಲ ರಾಷ್ಟ್ರಕ್ಕೆ ಮಾಡಿದ ಅಪಮಾನ. ಈ ವರ್ತನೆ ತೋರಿದ ನ್ಯಾಯಾಧೀಶರನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಬೇಕು. ಮತದಾನದ ಹಕ್ಕು ಕಸಿಯಬೇಕು. ಆಸ್ತಿಪಾಸ್ತಿ ಮುಟ್ಟುಗೋಲು ಹಾಕಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ. ರಾಷ್ಟ್ರ ನಾಯಕರಿಗೆ ಅಪಮಾನವಾದಾಗಲೂ ರಾಜ್ಯದ ಕಾನೂನು ಸಚಿವ, ಮುಖ್ಯಮಂತ್ರಿ ಮಾತಾಡದೇ ಇರುವುದು ಬೇಸರ, ನಾಚಿಕೆಗೇಡು ಎಂದರು.
ಬಸ್ ನಿಲ್ದಾಣದಿಂದ ಶಾಸಿ ವೃತ್ತದವರೆಗೆ ಪಂಜಿನ ಮೆರವಣಿಗೆ, ಪ್ರತಿಭಟನೆ, ಪ್ರತಿಕೃತಿ ದಹನ ನಡೆಸಲಾಯಿತು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ನ್ಯಾಯವಾದಿ ಇಲ್ಯಾಸ್ ನಾವುಂದ, ಸುರೇಶ್ ಬಾರ್ಕೂರು, ಪ್ರಭಾಕರ್ ವಿ., ಸುರೇಶ್ ಹಕ್ಲಾಡಿ, ದಸಂಸ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ನಾಗರಾಜ್ ಉಪ್ಪುಂದ, ಪೌರಕಾರ್ಮಿಕ ಸಂಘ ಜಿಲ್ಲಾಧ್ಯಕ್ಷ ನಾಗರಾಜ್ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು.