ಬಂಟ್ವಾಳ, ಜ.31 (DaijiworldNews/KP): ಸಿ.ಎಂ.ಇಬ್ರಾಹಿಂ ಅವರ ಅಸಮಾಧಾನಕ್ಕೂ, ತನಗೆ ನೀಡಿದ ವಿಧಾನಸಭಾ ಉಪನಾಯಕನ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಪ್ರಾಮಾಣಿಕ ಸೇವೆಗೆ ಈ ಸ್ಥಾನ ಲಭಿಸಿದೆ ಎಂದು ಕಾಂಗ್ರೆಸ್ ವಿಧಾನಸಭೆಯ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತೇ ಬೇರೆ, ವಿಧಾನಸಭೆಯೇ ಬೇರೆ, ಉಪನಾಯಕ ಸ್ಥಾನದ ಕುರಿತು ಹಿಂದೆಯೇ ಚರ್ಚೆಯಾಗಿತ್ತು, ಅವರ ಅಸಮಾಧಾನಕ್ಕೂ, ಉಪನಾಯಕ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ತಾನು ಚಿಕ್ಕ ವಯಸ್ಸಿನಿಂದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಗೊಂಡವನು, ನನ್ನ ಪ್ರಾಮಾಣಿಕ ಸೇವೆಗೆ ಪಕ್ಷದಲ್ಲಿ ಬೇರೆ ಬೇರೆ ಸ್ಥಾನಗಳನ್ನು ಅಲಂಕರಿಸಿದ್ದೇನೆ. ಮೊದಲು ಕಾರ್ಯಕರ್ತನಾಗಿ, ಶಾಸಕನಾಗಿ, ಸಚಿವನಾಗಿ ಎಲ್ಲ ಕಡೆಯಲ್ಲೂ ಉತ್ತಮ ಕೆಲಸ ಮಾಡಿರುವುದರಿಂದ ನನಗೆ ಈಗ ಉಪನಾಯಕ ಸ್ಥಾನ ಲಭಿಸಿದೆ ಎಂದರು.
ಇನ್ನು ಸಿ.ಎಂ.ಇಬ್ರಾಹಿಂ ಅವರು ನಮ್ಮ ಹಿರಿಯ ನಾಯಕರಾಗಿ ಹಲವಾರು ಕೊಡುಗೆಯನ್ನು ಪಕ್ಷಕ್ಕೆ ನೀಡಿದ್ದಾರೆ, ಅವರ ಕೊಡುಗೆ ಮುಂದೆಯು ಕೂಡ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅವರು ಕಾಂಗ್ರೆಸ್ನಲ್ಲೇ ಮುಂದುವರೆಯುತ್ತಾರೆ ಎಂದು ಖಾದರ್ ಹೇಳಿದರು.