ಉಡುಪಿ, ಜ 31(DaijiworldNews/MS): ಕರ್ಕಶ ಶಬ್ದ ಮಾಡುವ ಹಾಗೂ ಬೈಕ್ ಗಳಲ್ಲಿ ನಿಯಮ ಬಾಹಿರವಾಗಿ ಅಳವಡಿಸಿದ್ದ 71 ಸೈಲೆನ್ಸರ್ಗಳನ್ನು ಜಪ್ತಿ ಮಾಡಿಕೊಂಡಿರುವ ಉಡುಪಿ ಪೊಲೀಸ್ ಇಲಾಖೆಯೂ ಅವುಗಳನ್ನು ಜ.31ರ ಸೋಮವಾರ ಜೆಸಿಬಿ ಬಳಸಿ ಸಂಪೂರ್ಣ ನಾಶಪಡಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ಸಿಬ್ಬಂದಿಗಳು ಜ.01ರಿಂದ ಜ.25ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಮೋಟಾರು ವಾಹನ ನಿಯಮ ಉಲ್ಲಂಘಿಸಿದ ಒಟ್ಟು 71 ಮೋಟಾರು ವಾಹನ ಸೈಲೆನ್ಸರ್ಗಳನ್ನು ವಶಪಡಿಸಿಕೊಂಡಿದ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಕಳೆದ ವರ್ಷವೂ ಇದೇ ರೀತಿಯ ಕಾರ್ಯಾಚರಣೆ ನಡೆಸಿದ್ದೆವು. ಇದಾದ ಬಳಿಕವೂ ದೋಷಪೂರಿತ ಸೈಲೆನ್ಸರ್ಗಳ ಬಳಕೆ ಕುರಿತು ಹಲವು ದೂರುಗಳು ಬಂದಿದ್ದವು. ವೈದ್ಯರು ಮತ್ತು ಅಪಾರ್ಟ್ಮೆಂಟ್ ನಿವಾಸಿಗಳು ಸೇರಿದಂತೆ ಹಲವು ಮಂದಿ ಸ್ಥಳೀಯರು ಕರ್ಕಶ ಶಬ್ದ ಸೈಲೆನ್ಸರ್ಗಳ ನಿರಂತರ ಬಳಕೆಯ ಬಗ್ಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದು ಸೈಲೆನ್ಸರ್ಗಳನ್ನು ಅಳತೆ ಮಾಡಿ ವಾಹನ ಸವಾರರಿಗೆ ದಂಡ ವಿಧಿಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಈ ಕಾರ್ಯಾಚರಣೆ ಮುಂದುವರಿಯುತ್ತದೆ. ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಮಗೆ ದೂರುಗಳು ಬಂದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನಾವು ಕರ್ಕಶ ಶಬ್ದ ಮಾಡುವ ದೋಷಪೂರಿತ ಸೈಲೆನ್ಸರ್ ತಯಾರಕರು ಮತ್ತು ಸ್ಥಳೀಯವಾಗಿ ಅವುಗಳನ್ನು ಅಳವಡಿಸುವಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನುಗುರುತಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
80 ಡೆಸಿಬಲ್ನ ಮಿತಿಯನ್ನು ದಾಟುವ ಯಾವುದೇ ಸೈಲೆನ್ಸರ್ಗಳನ್ನು ದೋಷಯುಕ್ತ ಸೈಲೆನ್ಸರ್ಗಳು ಎಂದು ಗುರುತಿಸಲಾಗುತ್ತದೆ. ವಶಪಡಿಸಿಕೊಂಡ 25 ಸಾವಿರ ಮೌಲ್ಯದ 71 ಸೈಲೆನ್ಸರ್ಗಳನ್ನು ಜೆಸಿಬಿ ಬಳಸಿ ನಾಶಪಡಿಸಲಾಯಿತು. ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ್, ಉಡುಪಿ ಪೊಲೀಸ್ ಉಪ ಆಯುಕ್ತ ಸುಧಾಕರ್ ಎಸ್ ನಾಯ್ಕ್, ಹಾಗೂ ಮಣಿಪಾಲ ಠಾಣೆಯ ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.