ಕಾರ್ಕಳ, ಜ 31(DaijiworldNews/MS): ಗೋವುಗಳ ಕಳವು ಕೃತ್ಯ ಕಾರ್ಕಳ ತಾಲೂಕಿಗೆ ಹೊಸತ್ತೇನ್ನಲ್ಲ. ಈ ಹಿಂದೆ ಕಾರ್ಕಳ ನಗರಠಾಣಾಧಿಕಾರಿಯಾಗಿದ್ದ ವಿನೋದ್ ಭಟ್ ಹಾಗೂ ಜೀಪು ಚಾಲಕ ಸಂತೋಷ್ರವರು ರಾತ್ರಿ ಕರ್ತವ್ಯ ನಿರತರಾಗಿ ಗೋವು ಕಳವು ಕೃತ್ಯವನ್ನು ಮಟ್ಟ ಹಾಕಲು ಮುಂದಾಗಿದ್ದಾಗ ಪಳ್ಳಿ ಗ್ರಾಮದ ಕುಂಟಾಡಿ ಎಂಬಲ್ಲಿ ಪೊಲೀಸರ ಕೊಲೆಗೆ ಮುಂದಾಗ ಜೀಪನ್ನು ಪಲ್ಟಿ ಹೊಡೆಯುವಂತೆ ಮಾಡಿದ್ದರು. ಘಟನೆಯಲ್ಲಿ ಎಸ್ಐ ಸಹಿತ ಜೀಪು ಚಾಲಕ ಗಂಭೀರ ಗಾಯಗೊಂಡಿದ್ದರು.
2006ರಲ್ಲಿ ಹೆಬ್ರಿ ಠಾಣಾಧಿಕಾರಿಯಾಗಿದ್ದ ಸಿದ್ಧಲಿಂಗಯ್ಯ ಅವರ ನೇತೃತ್ವದಲ್ಲಿ ಪೊಲೀಸರ ತಂಡವು ಹೆಬ್ರಿಯಲ್ಲಿ ಅನುಮಾನಸ್ಪದ ವಾಹನವೊಂದನ್ನು ನಿಲ್ಲಿಸಲು ಮುಂದಾಗಿದ್ದರು. ವಾಹನ ನಿಲ್ಲಿಸದೇ ಹೋದಾಗ ವರಂಗವರೆಗೆ ಬೆನ್ನಟ್ಟಿದ ಪೊಲೀಸರ ಮೇಲೆ ಗೋವು ಕಳ್ಳರು ತಲವಾರು ದಾಳಿ ನಡೆಸಿದ ಪರಿಣಾಮವಾಗಿ ಹೆಡ್ಕಾನ್ಸ್ಟೇಬಲ್ರಾಗಿದ್ದ ಸೀನ ಸಲ್ಯಾನ್ರವರ ಕೈ ಯೊಂದು ಊನವಾಗಿತ್ತು. (ಇದೀಗ ಅವರು ಮಣಿಪಾಲ ಠಾಣೆಯಲ್ಲಿ ಎಎಸೈ ಆಗಿದ್ದಾರೆ.) ಪರಿಣಾಮವಾಗಿ ಪೊಲೀಸರು ಫಯರ್ ನಡೆಸಿದ ಪರಿಣಾಮವಾಗಿ ಮೂಡುಬಿದಿರೆಯ ಯುವ ಆರೋಪಿಯೊಬ್ಬ ಬಲಿಯಾದನು.
ಕುಕ್ಕುಂದೂರಿನಲ್ಲಿ ನಾಕಾ ಬಂಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರ ಠಾಣಾ ಹೆಡ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಅವರ ಮೇಲೆ ಗೋವು ಕಳವು ಸಾಗಾಟದ ವಾಹನವನ್ನು ಮುನ್ನುಗ್ಗಿಸಿ ಕೊಲೆಯತ್ನ ನಡೆಸಲಾಗಿತ್ತು.
ತನಿಕೋಡ್ ಚೆಕ್ಪೋಸ್ಟ್ ಬಳಿ ನಕ್ಸಲ್ ನಿಗ್ರಹ ದಳದವರು ಕರ್ತವ್ಯದಲ್ಲಿ ನಿರತರಾಗಿದ್ದಾಗ ಅನುಮಾನಸ್ಪದ ರೀತಿಯಲ್ಲಿ ಬಂದ ವಾಹನವನ್ನು ನಿಲ್ಲಿಸಲು ಮುಂದಾಗಿದ್ದಾಗ ವಾಹನವು ಕರ್ತವ್ಯ ನಿರತಪೊಲೀಸರ ಮೇಲೆ ಮುನ್ನುಗ್ಗಿದ್ದ ಪರಿಣಾಮವಾಗಿ ಎಎನ್ಎಫ್ ಸಿಬ್ಬಂದಿ ವನೀನ್ನಾಯಕ್ ನಡೆಸಿದ ಎನ್ಕೌಂಟರ್ಗೆ ಸುರತ್ಕಲ್ ಪರಿಸರದ ಕಬೀರ್ ಸಾವನೊಪ್ಪಿದ್ದ ಘಟನೆ ನಡೆದಿತ್ತು.
ಜ. ೨೯ ರಂದು ಕರ್ತವ್ಯ ನಿರತ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಗೋಕಳ್ಳರು ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ ಪ್ರಕರಣ ಈ ಎಲ್ಲಾ ಘಟನೆಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ.