ಬೆಳ್ತಂಗಡಿ, ಜ 30 (DaijiworldNews/HR): ಉಡುಪಿ ವಲಯದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಬೀದರ್ಗೆ ವರ್ಗಾವಣೆ ಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವುದನ್ನು ಬಿಲ್ಲವ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ.
ಮರಗಳ್ಳತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಖಂಡನೀಯ ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹೇಳಿದೆ.
ತಮಗೆ ನ್ಯಾಯ ಒದಗಿಸಿಕೊಡಿ ಎಂದು ಬೆಳ್ತಂಗಡಿ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಮಹಿಳಾ ಅಧಿಕಾರಿ ಪತ್ರ ಬರೆದಿದ್ದಾರೆ ಎಂದು ಸಂಘ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದು, ಸಂಧ್ಯಾ ಅವರನ್ನು ದೂರದ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಒತ್ತಡ ಹೇರುತ್ತಿರುವ ರೀತಿ ಬಿಲ್ಲವ ಸಮುದಾಯದ ಅಧಿಕಾರಿಗಳ ಮೇಲೆ ಹರೀಶ್ ಪೂಂಜಾ ಅವರಿಗಿರುವ ದ್ವೇಷವನ್ನು ತೋರಿಸುತ್ತದೆ ಎಂದು ಸಂಘ ಹೇಳಿದೆ.
ಮರಗಳ್ಳತನದಂತಹ ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಕ್ರಮಕೈಗೊಳ್ಳುವ ಬದಲು ಶಾಸಕರು ವಿನಾಕಾರಣ ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರಿಗಳನ್ನು ಶಿಕ್ಷಿಸುತ್ತಿದ್ದಾರೆ. ಕಾನೂನುಬಾಹಿರ ಕೃತ್ಯಗಳ ವಿರುದ್ಧ ಹೋರಾಡಿದ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ತಡೆಹಿಡಿಯಬೇಕು ಎಂದು ಮುಖ್ಯಮಂತ್ರಿಗೆ ಸಂಘಟನೆ ಒತ್ತಾಯಿಸಲಿದೆ ಎಂದು ತಿಳಿಸಿದೆ.
ಎರಡು ತಿಂಗಳ ಹಿಂದೆ ಬಾಲಕೃಷ್ಣ ಶೆಟ್ಟಿ ಎಂಬವರು ಬೆಳ್ತಂಗಡಿ ತಾಲೂಕಿನ ಕಲ್ಮಂಜದಲ್ಲಿ ಕೋಟ್ಯಾಂತರ ಮೌಲ್ಯದ ಹಲವು ಮರಗಳನ್ನು ಅಕ್ರಮವಾಗಿ ಕಡಿದಿದ್ದಾರೆ ಎನ್ನಲಾಗಿದ್ದು, ದೂರಿನ ಮೇರೆಗೆ ಸಂಧ್ಯಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಬೆಲೆಬಾಳುವ ಮರಗಳನ್ನು ಕಡಿದು ಹಾಕಿರುವುದು ಕಂಡು ಬಂದಿದೆ. ಅಧಿಕಾರಿ ಪ್ರಕರಣ ದಾಖಲಿಸಿಕೊಂಡು ಬಾಲಕೃಷ್ಣ ಶೆಟ್ಟಿ ಎಂಬುವವರಿಗೆ ಸೇರಿದ ಮರಮಟ್ಟು ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ವಿಷಯ ತಿಳಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ತಂಗಡಿ ಅರಣ್ಯ ವ್ಯಾಪ್ತಿಯ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಬೀದರ್ ಜಿಲ್ಲೆಗೆ ಸಂಧ್ಯಾ ಅವರನ್ನು ವರ್ಗಾವಣೆ ಮಾಡುವಲ್ಲಿ ಶಾಸಕರು ಕೈಜೋಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಶಾಸಕ ಹರೀಶ್ ಪೂಂಜಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರ ಹಾಗೂ ವರ್ಗಾವಣೆ ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅರಣ್ಯ ಸಂಚಾರಿ ದಳದ ಉಡುಪಿ ವಲಯದ ವ್ಯಾಪ್ತಿಯ ಅರಣ್ಯಾಧಿಕಾರಿ ಸಂಧ್ಯಾ ಸಚಿನ್ ಅವರು ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ದೈಜಿವರ್ಲ್ದ್ ನೊಂದಿಗೆ ಮಾತನಾಡಿ, ಶಾಸಕರು ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ನಿರ್ಧಾರ ಸರಿಯಲ್ಲ, ಅಧಿಕಾರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಿದ್ದು, ಅಕ್ರಮವಾಗಿ ಮರ ಕಡಿಯುವುದರ ವಿರುದ್ಧ ದಾಳಿ ನಡೆಸಲಾಗುತ್ತಿದೆ. ಇದು ಅಪರಾಧವಲ್ಲ ಅವರ ಕರ್ತವ್ಯ. ಸರ್ಕಾರಿ ಕೆಲಸಗಳಲ್ಲಿ ವರ್ಗಾವಣೆ ಸಾಮಾನ್ಯ ಆದರೆ ರಾಜಕೀಯ ವೈಷಮ್ಯದಿಂದ ಅಧಿಕಾರಿಯನ್ನು ವರ್ಗಾವಣೆ ಮಾಡಿ ನಿರ್ದಿಷ್ಟ ಸ್ಥಳಕ್ಕೆ ಕಳುಹಿಸುವುದು ಸರಿಯಲ್ಲ, ಹಾಗೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯದಲ್ಲ" ಎಂದಿದ್ದಾರೆ.