ಕಾರ್ಕಳ, ಜ 30 (DaijiworldNews/HR): ಕರ್ತವ್ಯ ನಿರತ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಗೋಕಳ್ಳರು ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ ಘಟನೆ ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ರವಿವಾರ ನಸುಕಿನ ಜಾವದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲಿನ ನಿವಾಸಿ ಸಯ್ಯದ್ ಜುಹಾದ್(31) ಬಂಧಿತ. ಈತ ಗೋ ಸಾಗಾಟ ವಾಹನದ ಮಾಹಿತಿದಾರನಾಗಿ ಕುಕೃತ್ಯದಲ್ಲಿ ಸಕ್ರಿಯಾಗೊಂಡಿದ್ದನು.
ಪ್ರಕರಣದಲ್ಲಿ ಭಾಗಿಯಾಗಿರುವ ಫಿರೋಜ್, ಮೈಯದ್ದಿ, ಸುರೇಶ್ ಆರೋತರು.
ಜನವರಿ 29ರ ರಾತ್ರಿ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಠಾಣಾ ಕಾನ್ಸ್ಟೇಬಲ್ ರಂಜಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪಿನ ಇದರ ಚಾಲಕ ಸತೀಶ್ ನಾಯ್ಕ ಇವರೊಂದಿಗೆ ಕರ್ತವ್ಯದಲ್ಲಿ ನಿರತರಾಗಿದ್ದು, ಪದವು, ಲೆಮಿನಾ ಕ್ರಾಸ್,ನಿಟ್ಟೆ, ಬೆಳ್ಮಣ್ಗಳಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಬಜಗೊಳಿ ಕಡೆಗಳಲ್ಲಿ ರೌಂಡ್ಸ್ ಮಾಡಿದರು. ಜನವರಿ 30ರ ಬೆಳಗಿನ ಜಾವ ಕಾರ್ಕಳ ತಾಲೂಕು ಮುಡಾರು ಗ್ರಾಮ ಹೆಪೆಜಾರು ಎಂಬಲ್ಲಿ ಬೀದಿ ದೀಪದ ಕೆಳಗಡೆ ಈ ಮೊದಲೇ ಹಾಕಿದ ಬ್ಯಾರಿಕೇಡ್ಗಳ ಬಳಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.
ಬಜಗೊಳಿ ಕಡೆಯಿಂದ ಮಾಳ ಕಡೆಗೆ ಓರ್ವ ಬೈಕ್ ಸವಾರ ಹಾಗೂ ಓರ್ವ ಕಾರು ಚಾಲಕ ಒಂದರ ಹಿಂದೆ ಒಂದರಂತೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರು. ಪೊಲೀಸರು ವಾಹನಗಳನ್ನು ನಿಲ್ಲಿಸುವಂತೆ ಕೈಸನ್ನೆ ಮಾಡಿದ್ದರು. ಬೈಕ್ ಸವಾರ ಹಾಗೂ ಕಾರಿನ ಚಾಲಕ ವಾಹನಗಳನ್ನು ನಿಲ್ಲಿಸದೇ ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಕಾರನ್ನು ಬ್ಯಾರಿಕೇಡ್ ಗಳಿಗೆ ಹೊಡೆದು ಪೋಲೀಸರ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿದ್ದರು.
ನುಗ್ಗುತ್ತಿದ್ದ ವಾಹನದಿಂದ ತಪ್ಪಿಸುವ ಭರದಲ್ಲಿ ಪೋಲೀಸರು ಹಾರಿದ ಪರಿಣಾಮವಾಗಿ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಪರಿಣಾಮ ಎಸ್ಐ ಸಹಿತ ಇತರ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಆರೋಪಿಗಳು ಉಪಯೋಗಿಸಿದ್ದ ಕಾರು ಮಾರುತಿ ರಿಡ್ಜ್ ಆಗಿದ್ದು, ಕಾರಿನಲ್ಲಿ ಚಾಲಕನನ್ನು ಹೊರತು ಪಡಿಸಿ ಇನ್ನೋರ್ವ ವ್ಯಕ್ತಿ ಇದ್ದು ಕಾರಿನ ಒಳಗಡೆ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದನ್ನು ಪೊಲೀಸರು ಗಮನಹರಿಸಿದ್ದಾರೆ.
ಪೊಲೀಸರು ಜೀಪಿನಲ್ಲಿ ಕಾರನ್ನು ಹಾಗೂ ಬೈಕ್ ನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಕಾರು ತಪ್ಪಿಸಿಕೊಂಡು ಮುಂದೆ ಸಾಗಿದ್ದರೆ, ಸುಮಾರು 3 ರಿಂದ 4 ಕಿ. ಮೀ. ದೂರದಲ್ಲಿ ಹುಕ್ರಟ್ಟೆ ಕ್ರಾಸ್ನಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೈಕ್ ನ್ನು ಅತಿವೇಗದಿಂದ ರಸ್ತೆ ತೀರಾ ಎಡಭಾಗಕ್ಕೆ ಚಲಾಯಿಸಿ ಬೈಕ್ ಸಮೇತ ರಸ್ತೆಯ ಬದಿಯ ಚರಂಡಿಗೆ ಬಿದ್ದು ಬೈಕ್ ನ್ನು ಅಲ್ಲಿಯೇ ಬಿಟ್ಟು ಅದರ ಸವಾರ ಓಡಲು ಪ್ರಯತ್ನಿಸಿದ್ದಾನೆ. ಬೈಕ್ ಸವಾರ ಸಯ್ಯದ್ ಜುಹಾದ್ನನ್ನು ಪೊಲೀಸರು ಬಂದಿಸಿದ್ದಾರೆ.
ಗೋ ಕಳವು ತಂಡಕ್ಕೆ ಮಾಳ ಚೌಕಿಯ ಸುರೇಶ ಎಂಬಾತನು ತನ್ನ ಮೊಬೈಲ್ ಮೂಲಕ ಕರೆ ಮಾಡಿ ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳ ಕುರಿತು ಸೈಯದ್ ಜುಹಾದ್ ಮಾಹಿತಿ ನೀಡುತ್ತಿದ್ದನು. ಆತ ತನ್ನ ಸಂಬಂಧಿ ಫೀರೋಜ್ ಹಾಗೂ ಮೈಯದ್ದಿ ಜೊತೆ ಸೇರಿ ದನಗಳನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ದನಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.