ಕಾರ್ಕಳ, ಜ. 29(DaijiworldNews/SM): ಸರಕಾರದ ವಿವಿಧ ಯೋಜನೆಗಳು ತಳಹಂತದಲ್ಲಿ ಕ್ಲಪ್ತ ಸಮಯದಲ್ಲಿ ಆರ್ಹ ಸಾಮಾನ್ಯರಿಗೆ ಸಿಗುವಂತಾಗಬೇಕು. ಜನರನ್ನು ಸತಾಯಿಸುವುದು ತರವಲ್ಲ. ಯೋಜನೆಯ ಕಾರ್ಯರೂಪವು ಸುತ್ತೋಲೆಯಲ್ಲಿ ಸುತ್ತಿಕೊಳ್ಳದೇ ಸಮಾಜದ ಕನಿಷ್ಠ ಜ್ಞಾನ ಹೊಂದಿ ಅಧಿಕಾರಿಗಲು ಕರ್ತವ್ಯ ನಿರ್ವಹಿಸಬೇಕು. ಯೋಜನೆಗಳು ಜನಸಾಮಾನ್ಯರ ನೆರವಿಗಾಗಿಯೇ ಇರುತ್ತದೆ. ಯೋಜನೆಯನ್ನು ಫಲಾನುಭವಿಗಳಿಗೆ ಹೆಚ್ಚು ಹೆಚ್ಚಾಗಿ ತಲುಪಿಸುವ ಸಂದರ್ಭದಲ್ಲಿ ಎದುರಾಗುವ ತೊಡಕುಗಳನ್ನು ತನ್ನ ಗಮನಕ್ಕೆ ತನ್ನಿ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ಹೇಳಿದರು.
ಕಾರ್ಕಳ, ಹೆಬ್ರಿ ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅವಿಭಜಿತ ಕಾರ್ಕಳ ತಾಲೂಕಿನ ಜನಮಾನಸದಲ್ಲಿ ಉಳಿಯುವಂತಹ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ತಮ್ಮಲ್ಲೂ ಇರಬೇಕು. ಇಂಧನ ಇಲಾಖೆಯಿಂದ ಈಗಾಗಲೇ ವಿಭಾಗೀಯ ಕಚೇರಿ, ಉಪವಿಭಾಗಗಳ ಸ್ಥಾಪನೆ, ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ರೂ.೧೧೦ ಕೋಟಿ ಅನುದಾನ ಕ್ಷೇತ್ರ ಬಂದಿದೆ. ಉಳಿದೆಲ್ಲ ಇಲಾಖೆಗಳಿಂದಲೂ ಇಂತಹದೇ ಯೋಜನೆಗಳು ತರುವಲ್ಲಿ ಪ್ರಯತ್ನಕ್ಕೆ ಇಲಾಖಾಧಿಕಾರಿಗಳ ಸಹಕಾರ ಬಯಸಿದರು. ಜಲಜೀವನ್ ಮಿಷನ್ ಯೋಜನೆ ಶೀಘ್ರದಲ್ಲಿ ಕಾರ್ಯಗತಗೊಳ್ಳಬೇಕು.ಅದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು, ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸುವ ಮೂಲಕ ಯೋಜನೆ ಕಾರ್ಯಗತ ಮಾಡಬೇಕು. ಹಲವು ಇಲಾಖೆಗಳ ಯೋಜನೆಗಳನ್ನು ನಿರ್ದಿಷ್ಟ ವ್ಯಕ್ತಿಗಳ ಪರಿಚಯಸ್ಥರಿಗೆಂದು ನೀಡಬಾರದು. ಎಲ್ಲ ಯೋಜನೆಗಳನ್ನು ಎಲ್ಲರಿಗೂ ಸಂದಾಗ ಅದರಲ್ಲಿ ಪ್ರಗತಿ ಕಾಣಲು ಸಾಧ್ಯವೆಂದರು.
ತಡವರಿಸಿದ ಅಧಿಕಾರಿ ಗರಂ ಆದ ಸಚಿವರು:
ಜಲಜೀವನ್ ಮಿಷನ್ ಕುರಿತು ಇಲಾಖಾಧಿಕಾರಿ ಸಭೆಯಲ್ಲಿ ಅಂಕಿಅಂಶ ನೀಡುವಲ್ಲಿ ತಡವರಿಸಿಕೊಂಡಿರುವುದರಕ್ಕೆ ಸಚಿವ ಸುನೀಲ್ಕುಮಾರ್ ಗರಂ ಆದರು.
ಇಲಾಖೆಯ ಕಾರ್ಯವೈಖರಿಯ ಕುರಿತು ಅಸಾಮಾಧಾನ ಮಾತುಗಳನ್ನು ವ್ಯಕ್ತ ಪಡಿಸಿದ ಸಚಿವ ವಿ.ಸುನೀಲ್ ಕುಮಾರ್, ಯೋಜನೆಯಗಳನ್ನು ಕ್ಷೇತ್ರಕ್ಕೆ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಜನಪ್ರತಿನಿಧಿಯದಾಗಿರುತ್ತದೆ. ಕಾಮಗಾರಿಯ ಪ್ರಗತಿಗೆ ಇಲಾಖಾಧಿಕಾರಿಗಳು ಪ್ರಮುಖರಾಗಿದ್ದು, ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು. ಅದನ್ನು ಮಾಡದೇ ಫ್ಯಾನ್ನ ತಳಭಾಗದಲ್ಲಿ ಕುಳಿತು, ಅದ್ಯಾವುದೋ ಲೆಕ್ಕಚಾರವನ್ನು ಬರೆದು ಸಭೆಯಲ್ಲಿ ಮಂಡಿಸಿ ಅಪಹಾಸ್ಯಕ್ಕೆ ಒಳಗಾಗದಿರಿ. ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದು ಪ್ರಶಂಸೆಗೆ ಒಳಗಾಗಿ ಎಂದರು.