ಬಂಟ್ವಾಳ, ಜ. 29(DaijiworldNews/SM): ತ್ರಿವಿಕ್ರಮನಂತೆ ಸುರಂಗವನ್ನು ಕೊರೆದು ನೀರನ್ನು ತರುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನವನ್ನು ಮಾಡಿದವರು. ಕಲ್ಲುಗುಡ್ಡೆಯಂತಿರುವ ಪ್ರದೇಶದಲ್ಲಿ ಕೃಷಿಯನ್ನು ಮಾಡಬೇಕು. ತನಗೆ ಬಂದ ಆಸ್ತಿಯಲ್ಲಿ ಕೃಷಿಯ ಮೂಲಕ ಬದುಕನ್ನು ಹಸನು ಮಾಡಬೇಕೆಂದು ಸಾಧನೆಯನ್ನು ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಶನಿವಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಅಮೈ ಮಹಾಲಿಂಗ ನಾಯ್ಕ ಅವರ ಮನೆಗೆ ಬೇಟಿ ನೀಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ತನ್ನ ತ್ಯಾಗ ಮತ್ತು ಶ್ರದ್ಧೆಯಿಂದ ಪರಿಶ್ರಮದಿಂದ ಮಾಡಿದ ಕಾರ್ಯಕ್ಕೆ ಭಗವಂತ ನೀರನ್ನು ಕೊಟ್ಟ. ಇಂತಹ ಸಾಧಕನನ್ನು ಗುರುತಿಸುವ ಕಾರ್ಯವನ್ನು ಈ ದೇಶದ ಪ್ರಧಾನ ಮಂತ್ರಿಗಳು ಮಾಡಿದ್ದಾರೆ. ಪ್ರದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಮಹಾಲಿಂಗ ನಾಯ್ಕರ ಪರಿಶ್ರಮ ದೇಶಕ್ಕೆ ಜಗತ್ತಿಗೆ ಪರಿಚಯವಾಗಿದೆ ಎಂದು ತಿಳಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ಹರಿಕೃಷ್ಣ ಬಂಟ್ವಾಳ, ದಯಾನಂದ ಉಜಿರೆಮಾರು, ಅರುಣ ವಿಟ್ಲ, ಮಾಧವ ಮಾವೆ, ರಾಜೇಶ್ ಕುಮಾರ್ ಬಾಳೆಕಲ್ಲು, ಯಶಸ್ವಿನಿ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.