ಉಡುಪಿ, ಜ 29 (DaijiworldNews/HR): ಹೆಬ್ರಿ ಬೀಡು ಡಾ. ಅರವಿಂದ ಬಲ್ಲಾಳ ಸ್ಮಾರಕ ದತ್ತಿನಿಧಿಯನ್ನು ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ರಂಜನ್ ಆರ್. ಪೈ ಅವರು ಇಂದು ಉದ್ಘಾಟಿಸಿದ್ದಾರೆ.
ಹೆಬ್ರಿ ಬೀಡು ಅಂಬಾ ಬಲ್ಲಾಳ ಮತ್ತು ಬೇಳಂಜೆ ಕೃಷ್ಣಯ್ಯ ಹೆಗ್ಡೆಯವರ ಪುತ್ರನಾಗಿ 1935ರಲ್ಲಿ ಜನಿಸಿದ ಅರವಿಂದ ಬಲ್ಲಾಳರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳನ್ನು ಕ್ರಿಶ್ಚಿಯನ್ ಹೈಸ್ಕೂಲ್, ಉಡುಪಿ ಹಾಗೂ ಇಂಟರ್ ಮಿಡಿಯೇಟ್ನ್ನು ಎಮ್.ಜಿ.ಎಮ್. ಕಾಲೇಜಿನಲ್ಲಿ ಪೂರೈಸಿ, ಮಣಿಪಾಲ ಮತ್ತು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜುಗಳಲ್ಲಿ ಎಮ್.ಬಿ.ಬಿ.ಎಸ್. ಮತ್ತು ಔಷಧೀಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರು.
1966 ನೇ ಇಸವಿಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡು, ಸಹಾಯಕ ವೈದ್ಯರಾಗಿ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಡಾ. ಕೆ. ಆರ್. ಶೆಟ್ಟಿ ಮತ್ತು ಡಾ ಬಿ. ಎಮ್. ಹೆಗ್ಡೆಯವರ ಮಾರ್ಗದರ್ಶನದಲ್ಲಿ ಡಾ. ಬಲ್ಲಾಳರು ರೋಗಿಗಳಿಗೆ ಉತ್ತಮ ಶುಶ್ರೂಷೆ ನೀಡುತ್ತಿದ್ದರು.
1979ನೇ ಇಸವಿಯಲ್ಲಿ, ಔಷಧೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಮಂಗಳೂರಿನ ಕಸ್ತೂರ್ಬಾ ಮಡಿಕಲ್ ಕಾಲೇಜಿಗೆ ಸೇರ್ಪಡೆಗೊಂಡು, ಅಲ್ಲಿ ವಿಭಾಗ ಮುಖ್ಯಸ್ಥರಾಗಿದ್ದ ಡಾ. ಎ. ಪ್ರಭಾಕರ ರಾಯರ ಜತೆ ಮೆಡಿಸಿನ್ ವಿಭಾಗದಲ್ಲಿ ಕೆಲಸ ಮಾಡಿದರು. ಮುಂದೆ ಪದೋನ್ನತಿಯೊಂದಿಗೆ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ 1996ನೇ ಇಸವಿಯಲ್ಲಿ, ಪ್ರಾಧ್ಯಾಪಕರಾಗಿ ನಿವೃತ್ತರಾದರು. ಉತ್ತಮ ಬೋಧನಾ ಕ್ರಮದಿಂದಾಗಿ ನೂರಾರು ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಅವರು ಗಳಿಸಿದ್ದರು. 1999 ರಿಂದ 2013 ನೇ ಇಸವಿಯವರೆಗೆ ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಇನ್ನು 2020ನೇ ಇಸವಿಯ ಮೇ ತಿಂಗಳಲ್ಲಿ ಪಾರ್ಶ್ವವಾಯು ಪೀಡಿತರಾಗಿ, ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಗೆ ಸೇರಿಸಲ್ಪಟ್ಟಾಗ ಅವರ ಸೋದರಳಿಯ ಹಾಗೂ ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳರು ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿಮ್ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಮೊಮ್ಮಗಳಾದ ಡಾ. ಮೀನಾಕ್ಷಿ ಎ. ಶೆಟ್ಟಿ ಮತ್ತು ಡಾ. ಎಮ್. ಚಕ್ರಪಾಣಿ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದರು.
ಅವಿವಾಹಿತರಾಗಿದ್ದ ಅವರು 14.04.2021ರಂದು ನಿಧನರಾದರು. ಅವರ ಅಂತ್ಯಕ್ರಿಯೆ ಮತ್ತು ಅಪರ ಕ್ರಿಯೆಗಳನ್ನು ಡಾ. ಹೆಚ್ ಎಸ್. ಬಲ್ಲಾಳರು ನೆರವೇರಿಸಿದರು. ತಾನು ವೈದ್ಯಕೀಯ ಪದವಿ ಪಡೆದು, 20 ವರ್ಷ ಸೇವೆ ಸಲ್ಲಿಸಿದ, ಮತ್ತು ಅಂತ್ಯಕಾಲದಲ್ಲಿ ಉಚಿತ ವೈದ್ಯಕೀಯ ನೆರವು ನೀಡಿದ ಕೆ.ಎಮ್.ಸಿ ಸಂಸ್ಥೆಗೆ ತನ್ನ ಎಲ್ಲಾ ಉಳಿತಾಯ ಮತ್ತು ಆಸ್ತಿಗಳನ್ನು ಅವರು ದಾನ ಮಾಡಿದ್ದಾರೆ. ಅವರ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಹೆಬ್ರಿ ಬೀಡು ಡಾ. ಅರವಿಂದ ಬಲ್ಲಾಳ ಸ್ಮಾರಕ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಮೂಲಕ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ನೀಡಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನು ಈ ದತ್ತಿನಿಧಿಗೆ ಎಲ್ಲಾ ಮೂಲಗಳಿಂದ 75 ಲಕ್ಷ ರೂಪಾಯಿಗಳ ದೇಣಿಗೆಯನ್ನು ಅವರು ನೀಡಿದ್ದಾರೆ. ರೂಪಾಯಿ 63 ಲಕ್ಷವನ್ನು ಅವರಿಗೆ ಶುಶ್ರೂಷೆಗೈದ ಕೆ.ಎಂ.ಸಿ.ಯ ನಿವೃತ್ತ ಅರಿವಳಿಕೆ ತಜ್ಞ ಡಾ ದಿವಾಕರ ಶೆಟ್ಟರ ಮೂಲಕ, ಹತ್ತು ಲಕ್ಷವನ್ನು ಅವರ ಮೆಚ್ಚಿನ ಶಿಷ್ಯ, ಮತ್ತು ಪ್ರಸಕ್ತ ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ವೆಂಕಟರಾಯ ಪ್ರಭು ಅವರ ಮೂಲಕ ಮತ್ತು 2 ಲಕ್ಷವನ್ನು ತಮ್ಮ ಸೋದರಳಿಯ ಉಡುಪಿಯ ದಂತ ವೈದ್ಯ ಡಾ. ಸುಧೀರ ಚಂದ್ರ ಬಲ್ಲಾಳರ ಮೂಲಕ ಪಾವತಿಗೆ ವ್ಯವಸ್ಥೆ ಮಾಡಿದ್ದಾರೆ. ರೂಪಾಯಿ 1.5 ಕೋಟಿಯ ಮೂಲ ಧನದೊಂದಿಗೆ ಪ್ರಾರಂಭವಾಗುವ ಈ ದತ್ತಿನಿಧಿಗೆ ಮಾಹೆ ಸಂಸ್ಥೆಯು 75 ಲಕ್ಷದ ಸಮಾನ ದೇಣಿಗೆಯನ್ನು ನೀಡಿದೆ.
ಡಾ. ಅರವಿಂದ ಬಲ್ಲಾಳರ ಆಶಯಗಳನ್ನು ಕಾರ್ಯಗತಗೊಳಿಸಲು ಮಾಹೆಯ ಸಹಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್, ಸಹ ಕುಲಪತಿ ಡಾ. ವೆಂಕಟರಾಯ ಪ್ರಭು ಮತ್ತು ಔಷಧೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಕಾಶ ಹರಿಶ್ಚಂದ್ರ ಅವರು ಸಹಕರಿಸಿದ್ದಾರೆ.
ಈ ದತ್ತಿನಿಧಿಯ ನಿರ್ವಹಣೆಗಾಗಿ ಈ ಪದಾಧಿಕಾರಿಗಳಿರುವ ವಿಶ್ವಸ್ಥ ಮಂಡಳಿಯನ್ನು ರಚಿಸಲಾಗಿದ್ದು, ಅದರಲ್ಲಿ ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು, ಡಾ. ಎಚ್ ಎಸ್ ಬಲ್ಲಾಳ್, ಸಹಕುಲಾಧಿಪತಿ, ಡಾ. ಎಮ್. ವೆಂಕಟ್ರಾಯ ಪ್ರಭು, ಸಹ ಕುಲಪತಿ, ಮಾಹೆ, ಡಾ. ದಿವಾಕರ ಶೆಟ್ಟಿ , ಅರಿವಳಿಕೆ ತಜ್ಞರು, ಮಂಗಳೂರು, ಡೀನ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಂಗಳೂರು - ಪದ ನಿಮಿತ್ತ ಸದಸ್ಯರು ವೈದ್ಯಕೀಯ ಅಧೀಕ್ಷಕರು, ಕೆ.ಎಮ್.ಸಿ. ಆಸ್ಪತ್ರೆ, ಅತ್ತಾವರ ಇದ್ದಾರೆ.