ಬೆಳ್ತಂಗಡಿ, ಜ 29 (DaijiworldNews/HR): ಶಾಸಕ ಹರೀಶ್ ಪೂಂಜಾ ಅವರ ನಿದರ್ಶನದ ಮೇರೆಗೆ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಇಲ್ಲಿಂದ ಬೀದರ್ಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಶಾಸಕರು ಮರಗಳ್ಳರಿಗೆ ಬೆಂಬಲಿಸಿ ದ್ವೇಷದಿಂದ ವರ್ಗ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿದಳದ ಪ್ರಭಾರ ಅಧಿಕಾರಿ ಸಂಧ್ಯಾ ಸಚಿನ್ ಆರೋಪಿಸಿದ್ದಾರೆ.
ಸಂಧ್ಯಾ ಸಚಿನ್ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಹರೀಶ್ ಪೂಂಜಾ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಹರೀಶ್ ಪೂಂಜಾ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿ ಹಾಕಿದ್ದು, ಸದ್ಯ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಹರೀಶ್ ಪೂಂಜಾ ಬರೆದಿರುವ ಪತ್ರ ವೈರಲ್ ಆಗಿದೆ.
ಇನ್ನು ತಮಗೆ ನ್ಯಾಯ ಒದಿಗಿಸಿಕೊಡಿ ಎಂದು ಬೆಳ್ತಂಗಡಿ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಮಹಿಳಾ ಅಧಿಕಾರಿ ಪತ್ರ ಬರೆದಿದ್ದು, ವೈಯಕ್ತಿಕ ದ್ವೇಷದಿಂದ ಏಕಪಕ್ಷೀಯ ಆದೇಶ ಎಂದು ಆರೋಪಿಸಿದ್ದಾರೆ.
ಬೆಳ್ತಂಗಡಿಯ ಅಕ್ರಮ ಮರ ಸಾಗಾಟಗಾರರ ಮರಮಟ್ಟು, ವಾಹನ ವಶಪಡಿಸಿಕೊಂಡ ಕಾರಣ ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ ಸಾಧಿಸಿದ್ದಾರೆ ಎಂದು ಆರೋಪಿದ್ದಾರೆ.