ಉಡುಪಿ, ಜ 29 (DaijiworldNews/HR): ಪತಿಗೆ ರಕ್ತ ಕೊಡಿಸಲು ಆರ್ಥಿಕ ಸಂಕಷ್ಟ ಎದುರಿಸಿದ ಮಹಿಳೆಯ ಸಂಕಷ್ಟ ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ದೇಶ ಸುತ್ತಿ ಅರಿವು ಮೂಡಿಸಲು ಹೊರಟಿದ್ದಾರೆ.
ದೆಹಲಿಯ ನಿವಾಸಿ ಕಿರಣ್ ವರ್ಮಾ ದೇಶಾದ್ಯಂತ ಅರಿವು ಮೂಡಿಸಲು ಹೊರಟ ಸಾಮಾಜಿಕ ಕಾರ್ಯಕರ್ತ.
ಕಳೆದ ವರ್ಷ ಡಿಸೆಂಬರ್ 28 ರಂದು ತ್ರಿವೆಂಡ್ರಂನಿಂದ ನಡೆದಾಡಲು ಆರಂಭಿಸಿ ಸುಮಾರು 750 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಬ್ಲಡ್ ಡೊನೇಟ್ ಕ್ಯಾಂಪ್ ನಡೆಸುವ ಸಂಸ್ಥೆಯನ್ನ ಸಂಪರ್ಕಿಸಿ ರಕ್ತದಾನ ಶಿಬಿರ ಕೂಡ ನಡೆಸಿದ್ದಾರೆ. ಹೀಗೆ ಹೋದಲೆಲ್ಲ ರಕ್ತದಾನ ಅರಿವು ಮೂಡಿಸಿ ಪ್ರತೀ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಹೆಚ್ಚು ಮಾಡುವುದರ ಮೂಲಕ ರಕ್ತದ ಲಭ್ಯತೆ ಆಗಬೇಕೆನ್ನುವ ಉದ್ದೇಶ ಕಿರಣ್ ವರ್ಮಾರದ್ದು. ಹೀಗೆ ರಕ್ತದ ಕೊರತೆ ಯಾರಿಗೂ ಆಗಬಾರದು ಎಂಬ ಸದುದ್ದೇಶದಿಂದ ಆರಂಭಿಸಿದ ಪಾದಯಾತ್ರೆ 750ಕಿಲೋಮೀಟರ್ ಪೂರೈಸಿ ಉಡುಪಿ ತಲುಪಿರುವ ಕಿರಣ್ ಇನ್ನು ಮುಂದೆ 20ಸಾವಿರ ಕಿಲೋಮೀಟರ್ ಪಾದಯಾತ್ರೆ ಎರಡು ವರ್ಷ ಗಳಲ್ಲಿ ಮುಗಿಸುವ ಗುರಿಯನ್ನ ಹೊಂದಿದ್ದಾರೆ.
ಜೂನ್ 14, 2024 ರಂದು ವಿಶ್ವ ರಕ್ತದಾನಿಗಳ ದಿನ ಇರುವ ಕಾರಣ ಅಂದು ನನ್ನ ರಕ್ತದಾನ ಅರಿವು ಪಾದಯಾತ್ರೆ ಮುಗಿಸಲಿದ್ದೇನೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ರು. ಹೀಗೆ ಕಾಲು ಹಾಗೂ ಬೆನ್ನು ಮೂಳೆಗೆ ಗಾಯವಾಗಿದ್ರೂ ಅರಿವು ಮೂಡಿಸುವ ಕಾರ್ಯ ಮುಂದುವರೆದಿದೆ. ತನ್ನ ಜೀವಕ್ಕೆ ತೊಂದರೆ ಆದ್ರೂ ಚಿಂತೆಯಿಲ್ಲ ಜನರು ರಕ್ತದ ಕೊರತೆಯಿಂದ ಪರದಾಡಬಾರದು ಅನ್ನುವ ಆಕಾಂಕ್ಷೆ ಕಿರಣ್ ವರ್ಮಾರದ್ದು.