ಬಂಟ್ವಾಳ,ಜ.29 (DaijiworldNews/KP): ಕಲ್ಲಡ್ಕದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಪ್ರಭಾಕರ ಭಟ್ ಅವರ ಮನೆಯ ಕಾಂಪೌಂಡ್ ಗೋಡೆ ಗುರುವಾರ ರಾತ್ರಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಬಿ.ಸಿ.ರೋಡ್-ಅಡ್ಡಹೊಳೆ ನಡುವಿನ ಸರ್ವೀಸ್ ರಸ್ತೆ ನಿರ್ಮಾಣವನ್ನು ಏಕಕಾಲಕ್ಕೆ ಕೈಗೆತ್ತಿಕೊಳ್ಳಲಾಗಿದ್ದು, ರಸ್ತೆ ವಿಸ್ತರಣೆ ಕಾಮಗಾರಿ ರಾತ್ರಿ ವೇಳೆಯೂ ಬಿರುಸಿನಿಂದ ನಡೆಯುತ್ತಿದೆ. ಈ ಕಾಮಗಾರಿಯನ್ನು ನಡೆಸುವಾಗ ಡಾ.ಭಟ್ ಅವರ ಕಾಂಪೌಂಡ್ ಗೋಡೆ ಕುಸಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮಾಡುವ ಜೊತೆಗೆ ನೀರು ಸರಾಗವಾಗಿ ಹರಿದು ಹೋಗಲು ಸಿಮೆಂಟ್ ಪೈಪ್ಗಳನ್ನು ಹಾಕಲಾಗುತ್ತಿದೆ. ಕಲ್ಲಡ್ಕ ಪೇಟೆಯಲ್ಲಿರುವ ಡಾ.ಭಟ್ ಅವರ ಮನೆಯ ಮುಂದೆ ಸಿಮೆಂಟ್ ಪೈಪ್ ಹಾಕಲು ಕಾಂಪೌಂಡ್ ಗೋಡೆಯ ಪಕ್ಕದಲ್ಲಿಯೇ ಇರುವ ಜಮೀನಿನಲ್ಲಿ ಮಣ್ಣನ್ನು ಅಗೆದಿದ್ದರಿಂದ ಮಣ್ಣು ಸಡಿಲವಾಗಿ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಗೋಡೆಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ.
ಸದ್ಯ ಮೇಲ್ಸೇತುವೆಯ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾಗುತ್ತಿದ್ದು, ಈವರೆಗೆ ರಸ್ತೆ ಅಗಲೀಕರಣದ ಬಗ್ಗೆ ನಿಖರವಾದ ಸರ್ವೆ ಕಾರ್ಯ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ.