ಉಡುಪಿ, ಜ. 28 (DaijiworldNews/SM): ರಾಯಚೂರಿನ ಜಿಲ್ಲಾ ನ್ಯಾಯಧೀಶರು ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವ ಮುನ್ನ ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಇಂದು ರಾಯಚೂರು ಜಿಲ್ಲಾ ನ್ಯಾಯಧೀಶರಾದ ಮಂಜುನಾಥ ಗೌಡ ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಲಾಯಿತು.
ಉಡುಪಿಯ ಅಜ್ಜರಕಾಡುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಚಿಂತಕ ಮತ್ತು ಉಪನ್ಯಾಸಕರಾದ ನಾರಾಯಣ ಮಣೂರು ಮಾತನಾಡಿ "ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಅಲ್ಲ. ಅಲ್ಲಿನ ನ್ಯಾಯಾಧೀಶರು ಅಂಬೇಡ್ಕರ್ ಫೋಟೋ ಇಡಲು ನನಗೆ ಹೈಕೋರ್ಟ್ ನಿರ್ದೇಶನ ಇಲ್ಲ ಎಂಬ ಮಾತನ್ನು ಹೇಳುತ್ತಾರೆ. ಆದರೆ ಗಾಂಧೀಜಿ ಫೊಟೋ ಇಡಲು, ಅದು ಪರಂಪರಾಗತವಾಗಿ ಬಂದ ಕಾರಣ ಅವಕಾಶ ನೀಡಿದ್ದೇನೆ ಎಂಬ ಮಾತನ್ನು ಹೇಳುತ್ತಾರೆ. ಕಳೆದ 2 ವರ್ಷಗಳಿಂದ ಮಕ್ಕಳಿಗೆ ಮತ್ತು ಸಾರ್ವಜನಿಕೆರಿಗೆ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪರಿಚಯ ಆಗಬೇಕು ಎನ್ನುವ ಉದ್ದೇಶದಿಂದ ಗಣರಾಜ್ಯೋತ್ಸವದ ದಿನ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲು ಸರಕಾರವೇ ಅನುಮತಿ ನೀಡಿದೆ. ಅಂಬೇಡ್ಕರ್ ಅವರಿಗೆ ನಿಜವಾಗಿಯೂ ಪ್ರೀತಿ ಗೌರವನ್ನು ತೋರಿಸುವುದಾದರೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವ ಸಮಸಮಾಜದ ಆಶಯವನ್ನು ಅನುಷ್ಟಾನಗೊಳಿಸುವ ಮೂಲಕ ಗೌರವ ಸಲ್ಲಿಸಲಿ" ಎಂದರು.
ಚಿಂತಕರಾದ ಫಣಿರಾಜ್ ಮಾತನಾಡಿ "ಗಣರಾಜ್ಯೋತ್ಸವದ ದಿನದಂದು ಯಾರದ್ದಾರೂ ಪೋಟೋ ಇಡುವ ಅವಶ್ಯಕತೆ ಇದ್ದಲ್ಲಿ ಅದು ಕೇವಲ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರದ್ದು ಮಾತ್ರ. ಈ ಪ್ರಕರಣವನ್ನು ಸಿಎಂ ಬೊಮ್ಮಾಯಿ ತನಿಖೆಗೆ ವಹಿಸಬೇಕು. 2021ರ ಜನವರಿ ತಿಂಗಳಲ್ಲಿ ರಾಯಚೂರಿನ ವಕೀಲರ ಸಂಘ ಗಣರಾಜ್ಯೋತ್ಸವದ ದಿನದಂದು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲು ಅವಕಾಶವನ್ನು ಕೇಳಿತ್ತು. ಇದೊಂದು ಹಗರಣವಾಗಿದೆ. ಗೊವಾಳ್ಕರ್ ವಾದಿ ಮನಸ್ಸುಗಳು ಇದನ್ನು ಮಾಡುತಿದ್ದಾರೆ. ಇದೇ ಜನವರಿ 26 ರಂದು ಮಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡಿದ ಮಕ್ಕಳು ಸಚಿವ ಸುನಿಲ್ ಕುಮಾರ್ ಎದುರಲ್ಲಿ ಕೇಸರಿ ಶಾಲು ಧರಿಸಿ ನಾಡಗೀತೆಯನ್ನು ಹಾಡಿದ್ದಾರೆ. ಇದು ಯಾರಿಗೂ ಕಾಣಿಸುತಿಲ್ಲವೇ?" ಎಂದು ಪ್ರಶ್ನಿಸಿದರು.