ಮಂಗಳೂರು, ಜ. 27 (DaijiworldNews/SM): ಹಿಜಾಬ್ ವಿಚಾರದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ. ಸಮಸ್ಯೆ ನಮ್ಮ ಬಳಿ ಬರದೆ ನಾವು ಮಾತನಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅವರು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿರುವ ಅವರು, ಪ್ರತಿಯೊಬ್ಬರ ವಿಚಾರಧಾರೆಗಳು ಬೇರೆ-ಬೇರೆ ಇರಬಹುದು. ಮನಸ್ಸಿನಲ್ಲಿ ದ್ವೇಷದ ಭಾವನೆ ಬಿಟ್ಟು ಪ್ರೀತಿ ಪೂರ್ವಕ ವಾತಾವರಣ ನಿರ್ಮಾಣವಾಗಬೇಕು. ಇಂತಹ ವಿಚಾರಗಳಿಂದ ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಉಂಟಾಗಬಾರದು. ಶಾಲೆಗೆ ಸೇರಿಸಿದವರು ಬೇರೆ ಇದರ ಬಗ್ಗೆ ಇಲ್ಲ ಸಲ್ಲದ ಕುರಿತು ಮತ್ತೊಬ್ಬರು ಮೂಗು ತೂರಿಸುವುದು ಸರಿಯಲ್ಲ ಎಂದರು.
ಶೈಕ್ಷಣಿಕ ನಿರ್ಧಾರ ಆ ಶಾಲೆಗಳ ಆಡಳಿತ ಮಂಡಳಿಗೆ ಬಿಟ್ಟಿದ್ದು. ಹಲವಾರು ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ.ಅಂತಹ ವಿದ್ಯಾರ್ಥಿಗಳನ್ನು ಶಾಲೆಯ ಒಳಗಡೆ ಕಳಿಸುವ ಕೆಲಸ ವಿದ್ಯಾರ್ಥಿ ಸಂಘಟನೆಗಳು ಮಾಡಲಿ. ದುಶ್ಚಟಕ್ಕೆ ಬಲಿಯಾದ ವಿದ್ಯಾರ್ಥಿಗಳ ಕುರಿತು ಗಮನಹರಿಸಲಿ. ಹಿಜಾಬ್ ವಿಚಾರವನ್ನು ಹೆತ್ತವರು ಬಗೆಹರಿಸಲಿ. ನಮ್ಮಿಂದ ಯಾವುದೇ ಸಹಾಯ ಬೇಕಿದ್ದಲ್ಲಿ ಸಂಬಂಧಪಟ್ಟವರೊಂದಿಗೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದರು.