ಮಂಗಳೂರು, ಜ 27 (DaijiworldNews/HR): ಸುಮಾರು 18 ವರ್ಷಗಳಿಂದ ಹೈನುಗಾರಿಕೆಯೇ ಜೀವನಾಧಾರ ಮಾಡಿಕೊಂಡು ಬದುಕುತ್ತಿರುವ ಬೋಂದೆಲ್ ಚರ್ಚ್ ಬಳಿಯ ನಿವಾಸಿ ಲಾರೆನ್ಸ್ ಡಿಸಿಲ್ವಾ ಮತ್ತು ಸರಿತಾ ಡಿಸಿಲ್ವಾ ಅವರು ತಮ್ಮ ಸ್ವಂತ ಮಕ್ಕಳಂತೆ ಸಾಕುತ್ತಿದ್ದ 48 ದನಗಳನ್ನು ಕಳೆದುಕೊಂಡಿದ್ದಾರೆ.
ಲಾರೆನ್ಸ್ ಡಿ ಸಿಲ್ವಾ ಅವರ ಕುಟುಂಬ ಪ್ರತಿನಿತ್ಯ ನೂರಾರು ಲೀಟರ್ ಹಾಲನ್ನು ಮನೆಮನೆಗೆ ಹಾಗೂ ಡೈರಿಗೆ ಹಾಕಿ ಜೀವನ ಸಾಗಿಸುತ್ತಿದ್ದು, ಆ ಮನೆಯಿಂದ ಗೋ ಕಳ್ಳರು ಕಳೆದ 15 ವರ್ಷದಲ್ಲಿ ಕುಟುಂಬದ ಜೀವನಾಧಾರವಾಗಿದ್ದ ಬರೋಬ್ಬರಿ 48 ದನಗಳನ್ನು ಕಳವುಗೈದಿದ್ದಾರೆ.
ಈ ಕುರಿತು ದೈಜಿವರ್ಲ್ಡ್ ಜೊತೆ ಮಾತನಾಡಿದ ಲಾರೆನ್ಸ್ ಡಿಸಿಲ್ವಾ, ನಾವು 18 ವರ್ಷಗಳಿಂದ ದನಗಳನ್ನು ಸಾಕುತ್ತಿದ್ದು, ಗೋ ಕಳ್ಳರು ಕಳೆದ 15 ವರ್ಷದಲ್ಲಿ ಕುಟುಂಬದ ಜೀವನಾಧಾರವಾಗಿದ್ದ ಬರೋಬ್ಬರಿ 48 ದನಗಳನ್ನು ಕಳವುಗೈದಿದ್ದಾರೆ. ಅದರಲ್ಲೂ 7 ದನಗಳು ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಕಳವಾಗಿದ್ದು, ದನಕಳವಾದಾಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಆರೋಪಿಗಳ ಸುಳಿವೇ ಲಭ್ಯವಾಗಲೇ ಇಲ್ಲ. ಇದರಿಂದ ನಾವು ಬೇಸತ್ತು ಠಾಣೆಗೆ ದೂರು ನೀಡುವುದನ್ನೇ ನಿಲ್ಲಿಸಿಬಿಟ್ಟಿದ್ದೇವೆ. ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲವೆಂದ ಮೇಲೆ ನಾವ್ಯಾಕೆ ದೂರು ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಜ. 23ರ ಘಟನೆಯ ಬಗ್ಗೆಯೂ ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇಂದಿಗೂ ಕೃತ್ಯವೆಸಗಿದವರ ಸುಳಿವೇ ಇಲ್ಲ.. ಹೀಗೆಯೇ ದನಗಳನ್ನು ಕದಿಯುತ್ತಿದ್ದರೆ ದನಗಳನ್ನು ಸಾಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸರಿತಾ ಡಿ ಸಿಲ್ವಾ ಮಾತನಾಡಿ, ಸದ್ಯ ನಮ್ಮ ಬಳಿ 30 ದನಗಳಿದ್ದು, ನಾವು ಸಾಕಿರುವ ಹಸುಗಳು ಗೋಕಳ್ಳರಿಗೆ ಬಲಿಯಾಗುತ್ತಿರುವುದು ಬೇಸರ ತಂದಿದೆ. ನಾವು ದನಗಳನ್ನು ಸಾಕಿ ಅದರಿಂದ ಬಂದ ಹಣದಿಂದ ನಮ್ಮ ಮೂವರು ಮಕ್ಕಳ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.