ಉಳ್ಳಾಲ, ಜ 26 (DaijiworldNews/HR): ಆರ್ಎಸ್ಎಸ್ ಮತ್ತು ಸಂಘ ಪರಿವಾರ ಬ್ರಾಹ್ಮಣ ಶಾಹಿತ್ವದ ಪರವಾಗಿ ಇದ್ದು, ಷೂದ್ರ ಸಮುದಾಯವನ್ನು ವಿರೋಧಿಸುತ್ತಾ ಹಿಂದುಳಿದ ವರ್ಗದ ನಾಯಕರು ಮೇಲಕ್ಕೆ ಬಂದಲ್ಲಿ ತಮ್ಮ ಬೇಳೆ ಬೇಯುವುದಿಲ್ಲ ಅನ್ನುವ ಉದ್ದೇಶದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ವಿರೋಧಿಸಿದೆ ಎಂದು ಡಿವೈಎಫ್ ಐ ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಹಾಗೂ ವಕೀಲ ನಿತಿನ್ ಕುತ್ತಾರ್ ಹೇಳಿದರು.
ಗಣರಾಜ್ಯೋತ್ಸವ ದಿನದಂದು ಕುತ್ತಾರು ಜಂಕ್ಷನ್ನಿನಲ್ಲಿ ಹಮ್ಮಿಕೊಂಡ ಗಣರಾಜ್ಯೋತ್ಸವ ಪೆರೇಡಿನಿಂದ ಗುರುಗಳನ್ನು ಹೊರಗಿಡಬಹುದು ಆದರೆ ನಮ್ಮ ಹೃದಯದಿಂದಲ್ಲ ಅನ್ನುವ ಡಿವೈಎಫ್ ಐ ಮುನ್ನೂರು ಗ್ರಾಮ ಸಮಿತಿ ಕೇಂದ್ರ ಸರಕಾರದ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ದೇಶದಾದ್ಯಂತ ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕಾಗಿ ಕೊಡುಗೆ ಹಾಗೂ ಷೂದ್ರ ಸಮುದಾಯವನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಬಲಾಢ್ಯಗೊಳಿಸಿ ಮೇಲಕ್ಕೆ ತರಲು ಅಪಾರವಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ವಿರೋಧಿಸಿ ಶಂಕಾರಾಚಾರ್ಯರ ಮೂರ್ತಿಯನ್ನು ಎದುರು ಇಡುವಂತಹ ಪ್ರಸ್ತಾಪವನ್ನು ಇಟ್ಟಿರುವ ಕೇಂದ್ರ ಸರಕಾರದ ನಿಲುವು ಮೇಲ್ವರ್ಗದ ಪರವಾಗಿರುವುದು ದಟ್ಟವಾಗಿದೆ. ಅಸ್ಪೃಶ್ಯತೆ, ಜಾತಿ ತಾರತಮ್ಯ, ಷೂದ್ರ ಸಮುದಾಯದವರಿಗೆ ದೇವಸ್ಥಾನಗಳಿಗೆ ಹೋಗದಂತೆ ನಿರ್ಬಂಧ ಹೇರಿದ್ದ ಕಾಲದಲ್ಲಿ ಪ್ರತ್ಯೇಕ ದೇವಸ್ಥಾನ ಸ್ಥಾಪಿಸಿ ಹಿಂದುಳಿದ ವರ್ಗದ ಯುವಜನ ಸಮುದಾಯವನ್ನು ಮೇಲಕ್ಕೆತ್ತಿದವರು ಬ್ರಹ್ಮಶ್ರೀ. ಕೇಂದ್ರ ಸರಕಾರದ ಈ ಧೋರಣೆ ವಿರುದ್ಧ ದೇಶದಾದ್ಯಂತ ಹೋರಾಡಲಿದ್ದೇವೆ ಎಂದರು.
ಈ ಸಂದರ್ಭ ಡಿವೈಎಫ್ ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ತೇವುಲ, ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ್ ನಾಯ್ಕ್, ಮುನ್ನೂರು ಗ್ರಾಮ ಕಾರ್ಯದರ್ಶಿ ಕಾರ್ತಿಕ್ ದೇಸೋಡಿ, ಮುಖಂಡರುಗಳಾದ ಮಹಾಬಲ ಟಿ.ದೆಪ್ಪೆಲಿಮಾರ್ ಭರತ್, ಸಂಕೇತ್, ಶ್ರವಣ್, ಕಾರ್ತಿಕ್ , ಸುರೇಶ್, ಕಾರ್ಮಿಕ ಮುಖಂಡರುಗಳಾದ ಜಯ ತೇವುಲ, ಜನಾರ್ದನ ಕುತ್ತಾರ್ ಉಪಸ್ಥಿತರಿದ್ದರು.