ಉಡುಪಿ, ಜ 26 (DaijiworldNews/HR): "ನಾರಾಯಣ ಗುರುವಿನ ಮೇಲೆ ಎಲ್ಲರಿಗೂ ಅಭಿಮಾನವಿದೆ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ನನ್ನ ವಿರೋಧವಿದೆ" ಎಂದು ನೂತನ ಉಡುಪಿ ಜಿಲ್ಲಾ ಉಸ್ತುವಾರಿ ಅಂಗಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾರಾಯಣ ಗುರುವಿನ ಇತಿಹಾಸವನ್ನು ಉಳಿಸುವ ಪೂರಕ ವ್ಯವಸ್ಥೆ ಆಗಬೇಕು. ಪ್ರಧಾನ ಮಂತ್ರಿಯವರು ಅಂಬೇಡ್ಕರ್ ಅವರ ಇತಿಹಾಸದ ನೆನಪಿಗಾಗಿ ಪಂಚಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಗುರುಗಳ ಮೇಲೆ ಯಾರಿಗೂ ಅಭಿಮಾನ ಕಡಿಮೆ ಇಲ್ಲ. ಈ ಹಿಂದೆ ಈ ವಿಚಾರಗಳು ಯಾಕೆ ಇರಲಿಲ್ಲ. ಇದೆಲ್ಲಾ ರಾಜಕೀಯ ದೃಷ್ಟಿಕೋನದಿಂದ ಮಾಡ್ತ ಇದ್ದಾರೆ. ಭಾವನೆಗಳು ಇದ್ದಾಗ ಪೂರಕ ವ್ಯವಸ್ಥೆ ಕೂಡ ಆಗುತ್ತದೆ. ಗುರುಗಳ ಇತಿಹಾಸ ಉಳಿಸುವ ಪೂರಕ ಕೆಲಸಗಳು ಮುಂದೆ ಆಗುತ್ತವೆ" ಎಂದರು.
ಬಿಜೆಪಿ ನಾಯಕರ ಪಕ್ಷಾಂತರ ವಿಚಾರವಾಗಿವಾಗಿ ಪ್ರತಿಕ್ರಿಯಿಸಿದ ಅವರು, "ಸಂಘಟನೆಗಳ ಬಗ್ಗೆ ಆಯಾಯ ರಾಜ್ಯದಲ್ಲಿ ಯೋಚನೆ ಮಾಡ್ತಾರೇ. ಸಂಘಟನೆ ವ್ಯವಸ್ಥೆ ಅಡಿ ಅಧಿಕಾರ ಪಡೆದುಕೊಂಡ ನಂತರ ನಾವು ಹೇಗೆ ಇರಬೇಕು ಎನ್ನುವುದನ್ನು ನಾವು ಯೋಚನೆ ಮಾಡಬೇಕು. ಆದರೆ ನಾವೇ ಹೊರಹೋಗುವ ಸ್ಥಿತಿ ತಂದುಕೊಂಡರೆ ಅದಕ್ಕೆ ಸಂಘಟನೆ ಹೊಣೆ ಅಲ್ಲ. ಸಂಘಟನೆ ಯಾರನ್ನು ಕೈ ಬಿಡಲ್ಲ. ಅವರಾಗಿಯೇ ಆ ಸ್ಥಿತಿ ತಂದುಕೊಟ್ಟಿದ್ದಕ್ಕೆ ಬೇರೆ ಯಾರೂ ಹೊಣೆ ಅಲ್ಲ" ಎಂದಿದ್ದಾರೆ.
ಕೆಲವು ಶಾಸಕರು ಅಸಮಾಧಾನ ಮಾಡಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಉಸ್ತುವಾರಿ ಆಗಿದ್ದು ಪಕ್ಷದ ತೀರ್ಮಾನ, ಯಾವ ಅಸಮಧಾನವೂ ಇಲ್ಲ. ಹಿಂದೆ ಜಿಲ್ಲೆಯ ಉಸ್ತುವಾರಿ ಆಗಿದ್ಧೆ. ಈಗ ಶಾಶ್ವತವಾಗಿ ಮಾಡಿದ್ದಾರೆ. ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ಇದ್ದೇ ಇದೆ. ಹೆಚ್ಚುವರಿ ಕೊಟ್ಟರೆ ಹೆಚ್ಚು ಗಮನ ಕೊಡಬೇಕು. ಸ್ಥಾನ ಕೊಟ್ಟರು ಕೊಡದಿದ್ದರೂ ನಾನು ಸಚಿವನಾಗಿ ಕೆಲಸ ಮಾಡಲೇಬೇಕು" ಎಂದರು.
ಸರಕಾರಿ ಬಾಲಕಿಯರ ಕಾಲೇಜಿನ ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು, ಸರಕಾರ ಸಮಾನತೆಗಾಗಿ ಕೆಲಸ ಮಾಡುತ್ತೆ, ಈಗಾಗಲೇ ಸಮಿತಿ ರಚನೆ ಮಾಡಿದೆ. ಮುಂದೆಯೂ ಅದರಲ್ಲಿ ತೀರ್ಮಾನ ತೆಗೆದು ಕೊಳ್ಳಲಾಗುತ್ತದೆ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ಬಿಜೆಪಿ ಮುಳುಗುವ ಹಡಗು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಮುಳುಗುವ ಹಡಗು ಸಿದ್ದರಾಮಯ್ಯ, ಬಿಜೆಪಿ ಅಲ್ಲ, ಅವರಿಗೇ ಸ್ಪಷ್ಟತೆ ಇಲ್ಲ, ಬಿಜೆಪಿ ಪಕ್ಷಕ್ಕೆ ಉದ್ದೇಶ, ವಿಚಾರ ಇದೆ. ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ" ಎಂದರು.