ಮಂಗಳೂರು, ಜ 26 (DaijiworldNews/HR): ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸಿರುವುದನ್ನು ಖಂಡಿಸಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಭಿಮಾನ ನಡಿಗೆ ಸಮಿತಿ ವತಿಯಿಂದ ಜ.26ರಂದು ಬುಧವಾರ ಗರೋಡಿ ದೇವಸ್ಥಾನದಿಂದ ಕುದ್ರೋಳಿ ದೇವಸ್ಥಾನದವರೆಗೆ ‘ಸ್ವಾಭಿಮಾನ ನಡಿಗೆ’ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಉರ್ವ ಸ್ಟೋರ್ ನಿಂದ ಕುದ್ರೋಳಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಲಿದ್ದು, ಗರೋಡಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಪಂಪ್ವೆಲ್ - ನಂತೂರು - ಕುಲಶೇಖರ್ - ಬೈತುರ್ಲಿ - ನೀರ್ಮಾರ್ಗ - ವಾಮಂಜೂರು - ಗುರುಪುರ - ಕೈಕಂಬ - ಸುಂಕದಕಟ್ಟೆ - ಬಜ್ಪೆ - ಕಾವೂರು - ಕುಳೂರು - ಪಣಂಬೂರು - ಸುರತ್ಕಲ್ - ಕುಳಾಯಿ - ನಂತೂರು - ಕತ್ತೂರು - ಗೇಟ್ ಮೂಲಕ ಸಾಗಲಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ನಾರಾಯಣ ಗುರುಗಳ ಟ್ಯಾಬ್ಲೋವನ್ನು ಹೊರಗಿಟ್ಟಿರುವುದರಿಂದ ನಾರಾಯಣ ಗುರುಗಳ ಅನುಯಾಯಿಗಳಿಗೆ ತೀವ್ರ ನೋವಾಗಿದೆ. ಇದು ಒಂದು ಅವಮಾನ. ಜಿಲ್ಲೆಯ ಇತರೆಡೆಯಿಂದ ಮೆರವಣಿಗೆಗಳು ಸೇರಿ ಒಗ್ಗಟ್ಟು ಪ್ರದರ್ಶಿಸಲಿವೆ. ಇದು ರಾಜಕೀಯ ಮೆರವಣಿಗೆಯಲ್ಲ. ಯಾವುದೇ ರಾಜಕೀಯ ಬಾವುಟಗಳನ್ನು ತೋರಿಸುವುದಿಲ್ಲ. ಬೆಂಬಲಿಗರು ಹಳದಿ ಶಾಲು ಹಾಕಿಕೊಂಡು ಬಾವುಟ ಹಿಡಿದಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಗರಡಿ ಅಧ್ಯಕ್ಷ ಚಿತ್ತರಂಜನ್, ಮಾಜಿ ಶಾಸಕರಾದ ಜೆ. ಆರ್. ಲೋಬೊ, ಮೊಯಿದೀನ್ ಬಾವಾ, ಐವನ್ ಡಿಸೋಜಾ, ಒಬಿಸಿ ಅಧ್ಯಕ್ಷ ವಿಶ್ವಾಸ್ ದಾಸ್, ಬ್ಲಾಕ್ ಅಧ್ಯಕ್ಷರಾದ ಸಲಿಂ, ಪ್ರಕಾಶ್ ಸಾಲ್ಯಾನ್, ಸುರೇಂದ್ರ ಕಂಬಳಿ, ಉಮೇಶ್ ದಂಡಕೇರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಪೂಜಾರಿ, ಪ್ರವೀಣ್ ಆಳ್ವ, ಶಶಿಧರ್ ಹೆಗ್ಡೆ, ಅಪ್ಪಿ, ಪ್ರತಿಭಾ ಕುಳಾಯಿ, ಶಾಲೆಟ್ ಪಿಂಟೋ, ಶಶಿಕಲಾ, ಶಾಂತಲ ಗಟ್ಟಿ, ರಾಜಶೇಖರ್ ಕೋಟ್ಯಾನ್, ಶುಭೋದಯ ಆಳ್ವ, ಟಿ. ಕೆ. ಸುಧೀರ್, ರಮಾನಂದ್ ಪೂಜಾರಿ, ಗಣೇಶ್ ಪೂಜಾರಿ, ಬಶೀರ್ ಬೈಕಂಪಾಡಿ, ಭರತೇಶ್ ಅಮೀನ್, ಮೆರಿಲ್ ರೇಗೊ, ಹೇಮಂತ್ ಗರೋಡಿ,ಮೊದಲಾದವರು ಉಪಸ್ಥಿತರಿದ್ದರು.