ವಿಟ್ಲ, ಜ. 25 (DaijiworldNews/SM): ಕರಾವಳಿ ಜನತೆ ಸಂಭ್ರಮಿಸುವ ಮತ್ತೊಂದು ಖುಷಿಯ ಸುದ್ದಿ. ಬರಡಾಗಿದ್ದ ಭೂಮಿಗೆ ಗಂಗೆ ಹರಿಸಿ ಕೃಷಿಯೋಗ್ಯ ಭೂಮಿಯನ್ನಾಗಿಸಿದ ಶ್ರಮ ಜೀವಿ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರನ್ನು ಪದ್ಮಶ್ರೀ ಪುರಸ್ಕಾರಕ್ಕೆ ಗುರುತಿಸಿಕೊಂಡಿದೆ. ಆ ಮೂಲಕ ಕರಾವಳಿಯ ಭಗೀರಥನ ಬೆವರಿನ ಶ್ರಮಕ್ಕೆ ಫಲಸಿಕ್ಕಿದಂತಾಗಿದೆ.
ಕೇಂದ್ರ ಸರಕಾರ ಕೃಷಿ ಕ್ಷೇತ್ರದ ಸಾಧಕ ಪ್ರಗತಿಪರ ಕೃಷಿಕ ಮಹಾಲಿಂಗ ನಾಯ್ಕ ಅವರನ್ನು 2022ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕೇಂದ್ರದ ಅತ್ಯುನ್ನತ ಪ್ರಶಸ್ತಿಗೆ ಕರಾವಳಿಯ ಶಿಕ್ಷಣ ಸಂತ ಹಾಜಬ್ಬ ಅವರನ್ನು ಗೌರವಿಸಿದ ಬೆನ್ನಲ್ಲೇ ಮತ್ತೊಬ್ಬ ಕರಾವಳಿಯ ಸಾಧಕನನ್ನು ಅಯ್ಕೆ ಮಾಡಿರುವುದು ತುಳುನಾಡಿನ ಜನತೆ ಹಿರಿಮೆಪಡುವಂತೆ ಮಾಡಿದೆ.
ಕೇವಲ ಬರಡು ಭೂಮಿಯಾಗಿದ್ದ ಜಾಗದಲ್ಲಿ ಕುಡಿಯುವ ನೀರಿಗಾಗಿ ಬಾವಿ ತೋಡಲು ಆರ್ಥಿಕ ಸಂಕಷ್ಟ ಮಹಾಲಿಂಗ ಅವರಿಗೆ ಎದುರಾಗಿತ್ತು. ಇದೇ ನೆವವಾಗಿಸಿಕೊಂಡು ಕೈಕಟ್ಟಿ ಕೂರದೆ ಕೃಷಿ ಪ್ರೇಮಿ ಮಹಾಲಿಂಗ ನಾಯ್ಕ ಅವರು ಛಲ, ಬಲ, ನೈಪುಣ್ಯತೆಯೊಂದಿಗೆ ಹೊಸ ಉಪಾಯ ಕಂಡುಕೊಂಡು ಸುರಂಗ ಕೊರೆಯಲು ಮುಂದಾಗಿದ್ದಾರೆ. ತಾನೇ ಸುರಂಗ ಕೊರೆಯುವ ಕಾರ್ಯಕ್ಕೆ ಕೃಷಿ ಪ್ರೇಮಿ ಮಹಾಲಿಂಗ ನಾಯ್ಕ ಅವರು ಮುಂದಾಗಿ ಇದರಲ್ಲಿ ಯಶಸ್ಸೂ ಕಂಡಿದ್ದಾರೆ.
ಮೊದಲಿಗೆ 30 ಮೀಟರ್ ಉದ್ದದ ಸುರಂಗ ಕೊರೆದರೂ ನೀರು ಸಿಗದಾಗ ಕೂಲಿ ಕೆಲಸ ಮಾಡಿಕೊಂಡೇ ರಾತ್ರಿ ವೇಳೆ ಸೀಮೆ ಎಣ್ಣೆ ದೀಪ ಇಟ್ಟುಕೊಂಡು ಆರು ಸುರಂಗ ಕೊರೆಯುತ್ತಾರೆ. ಅಲ್ಲೂ ನೀರು ಸಿಗದಿದ್ದಾಗ ಏಳನೇ ಸುರಂಗ ಕೊರೆದಿದ್ದು ಈ ವೇಳೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸುಮಾರು 75 ಮೀಟರ್ ವರೆಗೂ ಸೊರಂಗ ಕೊರೆದಾಗ ಅವರಿಗೆ ಸಾಕಾಗುವಷ್ಟು ನೀರು ಲಭಿಸಿದ್ದು ಆ ಬಳಿಕ ತೋಟ ನಿರ್ಮಿಸಿ ಅದರಿಂದ ಉತ್ತಮ ಫಸಲನ್ನ ಪಡೆಯುತ್ತಿದ್ದಾರೆ.
ತನ್ನ ಒಂದೂವರೆ ಎಕರೆ ಜಾಗದಲ್ಲಿ ತೆಂಗು, ಅಡಿಕೆ, ಬಾಳೆ, ಕರಿಮೆಣಸು, ಮೊದಲಾದ ಬೆಳೆಯನ್ನ ಬೆಳೆಸಿದ್ದು ಪಕ್ಕದಲ್ಲಿ ಕಾಡು ಹಾಗೂ ಗೇರು ಕೃಷಿ ಬೆಳೆಸಿದ್ದಾರೆ. ಅದರ ಜತೆಗೆ ಜೇನು ಕೃಷಿಯನ್ನೂ ನಡೆಸುತ್ತಿದ್ದು ಈಗ ಮಹಾಲಿಂಗ ನಾಯ್ಕರ ತೋಟದಲ್ಲಿ ಸುಮಾರು 300 ಅಡಿಕೆ ಮರಗಳು, 75 ತೆಂಗು ಮರ, 200 ಬಾಳೆಗಿಡಗಳು ಫಲ ನೀಡುತ್ತಿವೆ. ಅಷ್ಟೇ ಅಲ್ಲ ಇವರು ನಿರ್ಮಿಸಿರುವ ಇಂಗುಗುಂಡಿಯಿಂದ ಸುತ್ತಮುತ್ತಲಿನ ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗಿದೆ. ಮಹಾಲಿಂಗ ನಾಯ್ಕರ ತೋಟ ಅಭಿವೃದ್ಧಿಯಂತೆ ಇತರರ ತೋಟವೂ ಅಭಿವೃದ್ಧಿ ಹೊಂದುತ್ತಿದ್ದು ವಿದ್ಯುತ್ ಬಳಸದೇ ಸುರಂಗ ನೀರಿನ ವ್ಯವಸ್ಥೆಯಲ್ಲಿ ಗ್ರ್ಯಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆ ಮಾಡಿ ಮಹಾಲಿಂಗ ನಾಯ್ಕರು ನೂರಾರು ಜನರಿಗೆ ಮಾದರಿಯಾಗಿದ್ದಾರೆ. ಈ ಇಳಿ ವಯಸ್ಸಿನಲ್ಲೂ ತನ್ನಿಂದಾದಷ್ಟು ತೋಟದ ಕೆಲಸದಲ್ಲಿಯೆ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಹಾಲಿಂಗನಾಯ್ಕರಿಗೆ ಅವರ ಪತ್ನಿಯೂ ಸಾಥ್ ನೀಡುತ್ತಿದ್ದಾರೆ.