ಮಂಗಳೂರು, ಜ. 25 (DaijiworldNews/SM): ಭಾರತೀಯ ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೆ ನೀಡಿದ ಶಕ್ತಿ ಮತದಾನದ ಹಕ್ಕು. ಅದನ್ನು ನಿಷ್ಪಕ್ಷಪಾತವಾಗಿ ಹಾಗೂ ದೇಶದ ಏಳಿಗೆಗೆ ಬಳಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕರೆ ನೀಡಿದರು.
ಅವರು ಜ.೨೫ರ ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆಗಳಲ್ಲಿ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು, ಅದಕ್ಕೆ ಸಾಕಷ್ಟು ಮುತುವರ್ಜಿಯನ್ನು ವಹಿಸಬೇಕು, ಸಂವಿಧಾನ ನಮಗೆ ನೀಡಿರುವ ಆಯುಧವಾದ ಮತದಾನ ಹಕ್ಕನ್ನು ವಿವೇಚನೆಯಿಂದ ಬಳಸಿ ನಮ್ಮ ಭವಿಷ್ಯವನ್ನು ನಾವೇ ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಚುನಾವಣೆಯ ಸಂಧರ್ಭದಲ್ಲಿ ಆಮಿಷಕ್ಕೊಳಗಾಗದೆ ಮತ ಚಲಾವಣೆ ಮಾಡಿದ್ದಲ್ಲಿ ಭ್ರಷ್ಟಾಚಾರವನ್ನು ಹೊಡೆದೋಡಿಸಬಹುದು, ಜಿಲ್ಲೆಯಲ್ಲಿ 18 ವರ್ಷ ಪೂರೈಸಿದ ಅಂದಾಜು 30 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರಿದ್ದಾರೆ, ಅವರಿಗೆ ಚಾಲನಾ ಪರವಾನಿಗೆ ಪಡೆಯುದರಲ್ಲಿರುವ ಆಸಕ್ತಿ ಎಪಿಕ್ ಕಾರ್ಡ ಪಡೆಯುವುದರಲ್ಲಿ ಇಲ್ಲದಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ, ಇದೀಗ ವೋಟರ್ ಹೆಲ್ಪ್ಲೈನ್ಗಳ ಮೂಲಕವೂ ಎಪಿಕ್ ಕಾರ್ಡ್ ನಲ್ಲಿರುವ ದೋಷಗಳನ್ನು ತಿದ್ದಿಕೊಳ್ಳಬಹುದಾಗಿದೆ, ಅದೇ ರೀತಿ ಮತದಾನದ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ, ಬಿ.ಎಲ್.ಒಗಳು ಗರುಡಾ ಆಪ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ. ವಿದೇಶಗಳಲ್ಲಿರುವ ಜಿಲ್ಲೆಯ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಬಹುದಾಗಿದೆ, ಮತದಾರರ ಪಟ್ಟಿಯಲ್ಲಿ ಬದಲಾವಣೆಗಳಿದ್ದರೆ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ, ಮತದಾರರ ಸಾಕ್ಷರತಾ ಕ್ಲಬ್ಗಳು ಎಲ್ಲಾ ಕಾಲೇಜುಗಳಲ್ಲೂ ಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕು, ೧೮ ವರ್ಷ ಮೇಲ್ಪಟ್ಟವರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ಅವರು ಮಾತನಾಡಿ, ೨೦೧೧ರಲ್ಲಿ ದೇಶದಾದ್ಯಂತ ಮತದಾರರ ದಿನಾಚರಣೆ ಆರಂಭವಾಯಿತು, ಆ ಮೂಲಕ ಮತದಾರರನ್ನು ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ, ಶೇ. ೪೦ರಷ್ಟು ಮತದಾನವಾದಲ್ಲೀ ಸೂಕ್ತ ಅಭ್ಯರ್ಥಿಯ ಆಯ್ಕೆ ನಡೆಯುವುದಿಲ್ಲ. ಜನರ ಬೇಡಿಕೆಗಳನ್ನು ಈಡೇರಿಸುವ ಮತ್ತು ಉತ್ತಮ ಸಮಾಜ ನಿರ್ಮಿಸುವ ರಾಜಕಾರಣಿಯ ಉಗಮಕ್ಕೆ ದೇಶದ ಎಲ್ಲ ಪ್ರಜೆಗಳೂ ಕೂಡ ಮತದಾನ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗುತ್ತದೆ. ಆ ಮೂಲಕ ಜನರು ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.