ಮಂಗಳೂರು, ಜ.01 (DaijiworldNews/PY): "ಬಿಜೆಪಿ ಸರ್ಕಾರಕ್ಕೆ ಅಧಿಕಾರ ವಿಕೇಂದ್ರೀಕರಣದ ಆಸಕ್ತಿ ಇಲ್ಲ. ಅವರದ್ದು ಅಧಿಕಾರ ಕೇಂದ್ರೀಕರಣಗೊಳಿಸುವ ಆಸೆ" ಎಂದು ಶಾಸಕ ಯು ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಬಿಜೆಪಿಗರಿಗೆ ಪ್ರತಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಬೇಕು. ರೋಗಿಗಳಿಗೆ ಬೆಡ್, ಆಕ್ಸಿಜನ್ ಒದಗಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕು. ಕೊರೊನಾ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಅವರಿಗೆ ಆದೇಶ ನೀಡಬೇಕು. ಚುನಾವಣೆ ನಡೆಸಲು ಸಹ ಅವರ ಅನುಮತಿ ತೆಗೆದುಕೊಳ್ಳಬೇಕು. ಸೂಕ್ತ ಸಮಯಕ್ಕೆ ಚುನಾವಣೆ ನಡೆಸಲು ಸಮಸ್ಯೆ ಏನು?" ಎಂದು ಪ್ರಶ್ನಿಸಿದ್ಧಾರೆ.
"ಕೋಟೆಕಾರ್ ಚುನಾವಣೆಗೆ ಒಂದೂವರೆ ವರ್ಷ ಬೇಕಾಯಿತು. ಸೋಮೇಶ್ವರ ಬೇರೆ ಪಟ್ಟಣ ಪಂಚಾಯತ್. ಅದನ್ನು ಮೊನ್ನೆ ಮಾಡಬಹುದಿತ್ತು. ಪೆಂಡಿಂಗ್ ಇಟ್ಟಿದ್ದಾರೆ. ಇದೆಲ್ಲಾ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಮುಗಿದ ತಕ್ಷಣ ಮಾಡುವ ವಿಚಾರ. ಅದನ್ನು ಪೆಂಡಿಂಗ್ ಇಟ್ಟು ಆರು ತಿಂಗಳು ಆಗಿದೆ. ಈ ಬಗ್ಗೆ ಕೋರ್ಟ್ ಆದೇಶ ಬರುತ್ತದೆ ಎನ್ನುವಾಗ, ಕ್ಷೇತ್ರ ವಿಂಗಡಣೆ ಸರಿಯಾಗಿಲ್ಲ, ಇದಕ್ಕೆ ಆಯೋಗ ಮಾಡುತ್ತೇವೆ ಎಂದರು" ಎಂದು ತಿಳಿಸಿದ್ದಾರೆ.
"ಚುನಾವಣಾ ಕಮಿಷನ್ ಇರುವಾಗ ಕ್ಷೇತ್ರಕ್ಕೆ ಒಂದು ಆಯೋಗ ಮಾಡಿದ್ದರು. ಆಯೋಗ ಮಾಡಿ ಅಸೆಂಬ್ಲಿಯಲ್ಲಿ ಪಾಸ್ ಆಗಿ ಒಂದು ವರ್ಷ ಆಗಿದೆ. ಇನ್ನೂ ಗೈಡ್ಲೈನ್ಸ್, ರೂಲ್ಸ್ ನೀಡಿಲ್ಲ. ಇವರು ಕೇವಲ ಕೋರ್ಟ್ ಅನ್ನು ತಪ್ಪಿಸಲಿ ಬೇಕಾಗಿ ಈ ಆಯೋಗ ಮಾಡಿದ್ದಾರೆ. ಜನರಿಗಾಗಿ ಚುನಾವಣೆ ಮಾಡಬೇಕು ಎನ್ನುವ ಇಚ್ಛೆ ಸರ್ಕಾರಕ್ಕೆ ಇಲ್ಲ. ಇವರು ಜನರನ್ನು ಎಷ್ಟು ಮೂರ್ಖರನ್ನಾಗಿ ಮಾಡುತ್ತಾರೆ ಎಂದರೆ, ನಮ್ಮ ಜನರು ಈಗ ಕೂಡಾ ಇವರನ್ನು ನಂಬುತ್ತಾರೆ ಎಂದು ಬೇಸರ ಆಗುತ್ತದೆ. ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿಸುತ್ತಾರೆ. ಜನರಿಗೂ ಸಹ ಮೂರ್ಖರಾಗುವುದಕ್ಕೆ ಖುಷಿ" ಎಂದಿದ್ಧಾರೆ.
ತೊಕ್ಕೊಟ್ಟು- ಕುತ್ತಾರುವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆ, ಕಾಲೇಜು, ಸಂಘ-ಸಂಸ್ಥೆಗಳ ಬಸ್ ಸಂಚಾರ ಮಾರ್ಗದಲ್ಲಿ ಬದಲಾವಣೆಗೆ ಖಾದರ್ ಸೂಚನೆ ನೀಡಿದರು.
ರಸ್ತೆ ಅಗಲೀಕರಣದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಆಗಿದ್ದು, ಇದನ್ನು ಬಗೆಹರಿಸಲು ಸೂಚಿಸಿದರು. ನಾಳೆ ಮೆಡಿಕಲ್ ಹಾಗೂ ಇನ್ಫೋಸಿಸ್ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಲಿದ್ಧಾರೆ. ಮೆಡಿಕಲ್ ಕಾಲೇಜು ಹಾಗೂ ಇನ್ಫೋಸಿಸ್ ಬಸ್ಸುಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆಯಾಗಲಿದ್ದು, ಕೋಟೆಕಾರು, ಬೀರಿ, ಮಡ್ಯಾರು ಆಗಿ ದೇರಳಕಟ್ಟೆಯಾಗಿ ಹೋಗಲು ಸೂಚಿಸಿದರು.
"ಉಳಿದ ವಾಹನಗಳು ಯಥಾಸ್ಥಿತಿ ಸಂಚರಿಸಬಹುದು ಟ್ರಾಫಿಕ್ ಸಮಸ್ಯೆ ದೂರ ಮಾಡಲು ಈ ಯೋಚನೆ ಮಾಡಿದ್ದೇವೆ. ಎಲ್ಲರೂ ಸಹಕರಿಸಿ" ಎಂದು ಮನವಿ ಮಾಡಿದ್ದಾರೆ.