ಮಂಗಳೂರು, ಡಿ.31 (DaijiworldNews/PY): ಪ್ರವಾಸಿಗರು ಹೆಚ್ಚು ಓಡಾಡುವ ವರ್ಷಾರಂಭದಲ್ಲಿ ವೇಳೆಯಲ್ಲೇ ರಾತ್ರಿ ಕರ್ಫ್ಯೂ ವಿಧಿಸಿರುವುದು ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರು, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಲ್ಲಿ ಆತಂಕ ಉಂಟುಮಾಡಿದೆ.
ರಾತ್ರಿ ಕರ್ಫ್ಯೂ ವಿಶೇಷವಾಗಿ ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಹೊಡೆತ ಬೀಳುವ ಆತಂಕ ಎದುರಾಗಿದೆ. ಮೊದಲ ಲಾಕ್ಡೌನ್ ಮುಗಿಯುವ ಸಂದರ್ಭ ಹೋಟೆಲ್ ಉದ್ಯಮ ದೊಡ್ಡ ನಷ್ಟ ಅನುಭವಿಸಿತ್ತು.
ರಾತ್ರಿ ಕರ್ಫ್ಯೂ ಸಮಯದಲ್ಲಿ ಹೋಟೆಲ್ಗಳು ಮಾತ್ರವಲ್ಲದೇ, ವಸತಿಗೃಹಗಳು ಸಹ ಖಾಲಿಯಾಗಲಿವೆ. ಬಾರ್ ಹಾಗೂ ರೆಸ್ಟೋರೆಂಟ್ನಲ್ಲಿ ರಾತ್ರಿ ವೇಳೆ ಮಾತ್ರವೇ ವ್ಯಾಪಾರ ನಡೆಯುತ್ತವೆ. ಇದೇ ಸಮಯದಲ್ಲಿ ಜನರ ಓಡಾಟಕ್ಕೆ ನಿರ್ಬಂಧವಿರುವ ಕಾರಣ ಇಲ್ಲಿನ ವ್ಯಾಪಾರ ಹೆಚ್ಚು ನಷ್ಟವಾಗಲಿದೆ.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ದೂರದ ಊರುಗಳಿಗೆ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಸಿಗುವುದು ಕಡಿಮೆ. ಕೇರಳ-ಕರ್ನಾಟಕ ಗಡಿ ಪ್ರದೇಶದ ಟ್ಯಾಕ್ಸಿ ಚಾಲಕರು ಕೇರಳದಲ್ಲಿ ಓಡಾಟ ನಡೆಸಲು ಪರವಾನಗಿ ಪಡೆದಿದ್ದರೂ ಸಹ ಯಾವುದೇ ಪ್ರಯೋಜನ ಇಲ್ಲ.
ಹೊಸ ವರ್ಷ ಹಾಗೂ ಕ್ರಿಸ್ಮಸ್ ಜೊತೆಯಾಗಿ ಬರುವ ಅವಧಿಯಲ್ಲಿ ವಿದೇಶ ಹಾಗೂ ಪರ ಊರುಗಳಲ್ಲಿ ನೆಲೆಸಿರುವ ಹೆಚ್ಚಿನ ಮಂದಿ ಊರಿಗೆ ಮರಳುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಓಡಾಡುತ್ತಾರೆ. ಈ ವೇಳೆ ಹೆಚ್ಚಿನ ವ್ಯಾಪಾರ ನಡೆಯುತ್ತದೆ.
ದಕ್ಷಿಣ ಕನ್ನಡ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ಮಾತನಾಡಿ, "ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ದೇವೆ. ವರ್ಷಾರಂಭ ಇಡೀ ವರ್ಷದಲ್ಲಿ ಒಳ್ಳೆಯ ವ್ಯಾಪಾರ ಇರುವ ಸಂದರ್ಭ. ಈ ವೇಳೆಯಲ್ಲೇ ನೈಟ್ ಕರ್ಫ್ಯೂ ವಿಧಿಸಿದ್ದರಿಂದ ಸಾಯಂಕಾಲದ ಬಳಿಕ ಜನರು ಪೇಟೆಯಲ್ಲಿ ಓಡಾಡುವುದನ್ನೇ ಕಡಿಮೆ ಮಾಡುತ್ತಾರೆ. ಇದು ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತದೆ" ಎಂದಿದ್ದಾರೆ.