ಕಾರ್ಕಳ, ಡಿ.30 (DaijiworldNews/PY): ಹಿರಿಯ ಪತ್ರಕರ್ತ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕೊಡಮಾಡಿದ ಪ್ರತಿಷ್ಠಿತ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಯನ್ನು ಮಹರ್ಷಿ ಆನಂದ ಗುರೂಜಿ ಅವರು ಪ್ರದಾನಿಸಿದರು. ಕರಾವಳಿಯ ಉಭಯ ಜಿಲ್ಲೆಗಳಿಂದ ಏಕೈಕ ಹೆಸರಾಗಿ ಅಜೆಕಾರು ಅವರನ್ನು ಕೌನ್ಸಿಲ್ ಗೌರವಕ್ಕೆ ಆಯ್ಕೆ ಮಾಡಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 17 ಮಂದಿ ಹಿರಿಯ, ಅನುಭವಿ ಪತ್ರಕರ್ತರನ್ನು ಗುರುತಿಸಿ ಬೆಂಗಳೂರಿನ ಚೌಡಯ್ಯ ಮೊಮೋರಿಯಲ್ ಹಾಲ್ನಲ್ಲಿ ಸೋಮವಾರ ಭವ್ಯ ಸಮಾರಂಭದಲ್ಲಿ ತಾಮ್ರಪತ್ರ, ಶಾಲು, ನೆನಪಿನ ಕಾಣಿಕೆ ಸಹಿತ ಗೌರವಿಸಲಾಯಿತು.
"ಸಮಾಜಕ್ಕೆ, ಸಮಾಜದ ಒಳಿತಿಗಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ಕರ್ನಾಟಕದ ಮಾಧ್ಯಮ ಲೋಕದ ನಿಜಾರ್ಥದ ರತ್ನಗಳನ್ನು ಗುರುತಿಸಿದ ಅಮೂಲ್ಯ ಕ್ಷಣ. ಅಂತವರನ್ನು ಗೌರವಿಸುವ ಅವಕಾಶ ಧನ್ಯತೆಯನ್ನು ತಂದಿದೆ" ಎಂದು ಆನಂದ ಗುರೂಜಿ ಪ್ರಶಂಸೆ ವ್ಯಕ್ತ ಪಡಿಸಿದರು.
ಹಾಸನ ಪ್ರತಿನಿಧಿ ಸಂಪಾದಕ ಡಾ. ಉದಯರವಿ, ಎಲ್.ಎಸ್.ಶಾಸ್ತ್ರೀ, ಸಿದ್ಧರಾಜು, ಎಂ.ಎಸ್.ಮಣಿ, ಮಾಲತೇಶ್ ಅಂಗೂರ, ಮಹೇಶ್ ಅಂಗಡಿ, ಶಿವಲಿಂಗಪ್ಪ, ನಂಜುಡಪ್ಪ ವಿ, ಮಹಮ್ಮದ್ ಭಾಷಾ ಗೂಳ್ಯಂ, ಲೋಚನೇಶ್ ಹೂಗಾರ, ವಾಸುದೇವ ಜೋಶಿ, ಕೆ.ಎಸ್. ಸೋಮಶೇಖರ್, ಸಿದ್ಧರಾಮಪ್ಪ ಸಿರಿಗೇರಿ, ಸಿ.ಎಂ,ಜೋಶಿ, ಎಸ್.ಕೇಶವ, ನಾಗೇಂದ್ರ ಈ ಗೌರವಕ್ಕೆ ಪಾತ್ರರಾದ ಹಿರಿಯ ಪತ್ರಕರ್ತರು.
ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ, ಸೋಮಶೇಖರ ಅವರು, "ಇದೊಂದು ವಿನೂತನ ಕಾರ್ಯಕ್ರಮ" ಎಂದು ಶುಭ ಹಾರೈಸಿದರು. ಕರಾವಳಿಗರ ಕತೃತ್ವ ಶಕ್ತಿಯನ್ನು ಅವರು ಕೊಂಡಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಭರಣ ವಿಶೇಷ ಅತಿಥಿಯಾಗಿದ್ದು ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಪ್ರೆಸ್ ಕೌನ್ಸಿಲ್ನ ರಾಜ್ಯಾಧ್ಯಕ್ಷ ಡಾ.ಟಿ.ಶಿವಕುಮಾರ್ ನಾಗರ ನವಿಲೆ, ಮಹಿಳಾ ಘಟಕದ ಅಧ್ಯಕ್ಷೆ ಡಾ.ವಿ.ಸೌಭಾಗ್ಯ ಕೃಷ್ಣೇಗೌಡ, ಇಂದು ಸಂಜೆ ಪತ್ರಿಕೆಯ ಸಂಪಾದಕಿ ಪದ್ಮಾ ನಾಗರಾಜ್ ಕಲಾ ನವೀನ್ ಫಿಲಂ ಇನ್ಸಿಟ್ಯೂಟ್ನ ಮುಖ್ಯಸ್ಥ ಕಲಾನವೀನ್, ಕಾನೂನು ಘಟಕದ ಅಧ್ಯಕ್ಷೆ ಜ್ಯೋತಿ ತಲ್ಲೂರ್, ಕೌನ್ಸಿಲ್ನ ಉಪಾಧ್ಯಕ್ಷ ಜಿ.ಎನ್. ರವಿಕುಮಾರ್, ಕಲಾವಿದ ಎಂ.ಡಿ.ಕೌಶಿಕ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.