ಪುತ್ತೂರು, ಡಿ 30 (DaijiworldNews/MS): ಭಾರತ್ ಬ್ಯಾಂಕ್ ಮೂಡುಬಿದಿರೆ ಶಾಖೆಯಿಂದ ನಕಲಿ ದಾಖಲೆ ಸಲ್ಲಿಸಿ ಆ ಮೂಲಕ ಸಾಲ ಪಡೆದು ಬ್ಯಾಂಕ್ಗೆ ವಂಚಿಸಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಪುತ್ತೂರು ಹಾಗೂ ಸುಳ್ಯದ ತಾಲೂಕಿನ ಆರು ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಪುತ್ತೂರಿನಲ್ಲಿ ಕಚೇರಿ ಹೊಂದಿರುವ ಸಿವಿಲ್ ಎಂಜಿನಿಯರ್ ರೋಹಿತಾಕ್ಷ ಕೆ, ಕಲ್ಮಡ್ಕದ ಬೆಟ್ಟ ಉದಯಕುಮಾರ್, ಮಹಮ್ಮದ್, ಅಶ್ರಫ್, ಬಾಳಿಲದ ಮಜೀದ್ ದೀಕ್ಷಿತ್ ನನ್ನು ಸಿಸಿಬಿ ಆರ್ಥಿಕ ಅಪರಾಧ ವಿಭಾಗ್ದ ಎಸ್.ಐ ಸತೀಶ್ ನೇತೃತ್ವದ ತಂಡ ಬಂಧಿಸಿದೆ.
ಮಜೀದ್, ಮಹಮ್ಮದ್, ಅಶ್ರಫ್ ಮತ್ತಿತರರ ಹೆಸರಲ್ಲಿ ಹಲವು ಲಕ್ಷ ರೂ.ಗಳ ಸಾಲ ಮಾಡಿ ಅದನ್ನು ಬೆಟ್ಟ ಉದಯಕುಮಾರ್ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು 2 ಕೋಟಿ 10 ಲಕ್ಷ ರೂ. ಗಳ ಸಾಲ ಆರು ಮಂದಿಯ ಹೆಸರಿನಲ್ಲಿ ಮಾಡಲಾಗಿದೆ ಎನ್ನಲಾಗಿದ್ದು ಆರು ಪ್ರಕರಣಗಳ ಬಗ್ಗೆಯೂ ಪ್ರತ್ಯೇಕ ಪ್ರತ್ಯೇಕವಾಗಿ ಕೇಸು ದಾಖಲಾಗಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಟ್ಟ ಉದಯ್ ಕುಮಾರ್ ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಉದ್ದೇಶದಿಂದ ಕೆಲವು ಎಕ್ರೆ ಭೂಮಿ ಖರೀದಿಸಿದ್ದರು. ಇಲ್ಲಿ ನಿವೇಶನಗಳು ಮಾರಾಟವಾಗ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆದರಿಂದ ಹೊರಬರಲು ಭಾರತ್ ಬ್ಯಾಂಕ್ ನಲ್ಲಿ ಸಾಲ ಮಾಡಿರುವುದಾಗಿ ಹೇಳಲಾಗುತ್ತಿದೆ.
ಭಾರತ್ ಬ್ಯಾಂಕ್ ಮೂಡುಬಿದಿರೆ ಶಾಖೆಯ ವ್ಯವಸ್ಥಾಪಕ ಸುಧೀರ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದು,ಅವರು ಇತ್ತೀಚೆಗೆ ಮೃತಪಟ್ಟಿದ್ದಾರೆ. ನೂತನ ವ್ಯವಸ್ಥಾಪಕ ಗಣೇಶ್ ಅಮೀನ್ ಅವರು ನಕಲಿ ವಂಚನಾ ಜಾಲವನ್ನು ಪತ್ತೆಹಚ್ಚಿ ದೂರು ನೀಡಿದ್ದಾರೆ .