ಉಡುಪಿ, ಡಿ 29 (DaijiworldNews/MS): ಭಾರತೀಯ ಜನತಾ ಪಕ್ಷದ ಆದೇಶದಂತೆ ಒಬ್ಬ ಅತ್ಯಂತ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ 18 ತಿಂಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ ರಾಘವೇಂದ್ರ ಕೆ ಕಿಣಿಯವರು ಪಕ್ಷದ ಹಿರಿಯರ ಆದೇಶದಂತೆ ಬುಧವಾರ, ಡಿಸೆಂಬರ್ 29ರ ಬುಧವಾರ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ.
ಕಿಣಿಯವರು ಒಟ್ಟು ಮೂರೂ ವರ್ಷದ ಅಧಿಕಾರಾವಧಿಯಲ್ಲಿ 18 ತಿಂಗಳು ಪ್ರಾಧಿಕಾರದ ಚುಕ್ಕಾಣಿ ಹಿಡಿದು ಮುನ್ನಡೆಸಿದ್ದು , ಈಗಾಗಲೇ ನೂತನ ಅಧ್ಯಕ್ಷರ ಆಯ್ಕೆ ಆಗಿದ್ದು , ಇನ್ನು ಮೂರು ನಾಲ್ಕು ದಿನಗಳಲ್ಲಿ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಆಗಲಿದೆ.
ರಾಜೀನಾಮೆಯ ಕುರಿತು ದಾಯ್ಜಿವರ್ಲ್ಡ್ ನೊಂದಿಗೆ ಮಾತನಾಡಿದ ಅವರು, "ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ನೀಡಿ ಪಾರದರ್ಶಕತೆಯಿಂದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಆಡಳಿತ ಕೆಲಸ ಮಾಡಿದೆ. ಮೊದಲೇ ಪಕ್ಷದ ಹಿರಿಯರ ಆದೇಶವಿದ್ದಂತೆ ರಾಜೀನಾಮೆ ನೀಡಿದ್ದೇನೆ. ಪ್ರಾಧಿಕಾರದಲ್ಲಿ ೯೯% ಆನ್ ಲೈನ್ ಮೂಲಕ ಕೆಲಸಗಳು ನಡೆಯುತ್ತಿವೆ. ನಾಗರಿಕರಿಗೆ ಅಗತ್ಯ ಸೇವೆಗಳು ವಿಳಂಬವಾಗದಂತೆ ಹೆಚ್ಚುವರಿ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಲಾಗಿದೆ. ಅಷ್ಟೆ ಅಲ್ಲದೆ ಸಾರ್ವಜನಿಕರು ಮಧ್ಯವರ್ತಿ ಹಾವಳಿಯಿಂದ ತಪ್ಪಿಸಿಕೊಳ್ಳಲು ನೇರವಾಗಿ ಅರ್ಜಿದಾರರಿಗೆ ವಾಟ್ಸಾಪ್ ಸಂದೇಶ ಹೋಗುವಂತಹ "ಟ್ರ್ಯಾಕ್ ಯುವರ್ ಫೈಲ್ " ಎನ್ನುವ ಸಿಸ್ಟಮ್ ರಚಿಸಲಾಗಿದೆ.
ಅಷ್ಟೇ ಅಲ್ಲದೆ ಅಧಿಕಾರ ವಹಿಸಿಕೊಂಡ ಮೂರೂ ತಿಂಗಳಲ್ಲಿ ಅರ್ಜಿ ವಿಲೇವಾರಿಗೆ ಅವಧಿ ನಿಗದಿ ಪಡಿಸಿದ್ದಲ್ಲದೆ, ಕ್ಲಪ್ತ ಸಮಯದಲ್ಲಿ ವಿಲೇವಾರಿಗಾಗಿ ಒತ್ತು ನೀಡಲಾಯಿತು.
ಮುಖ್ಯವಾಗಿ , ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪೆರಂಪಳ್ಳಿ - ಅಂಬಾಗಿಲು ( 4.97 ಕಿಮಿ ) ಉದ್ದದ ರಸ್ತೆಯು ಟಿ ಡಿ ಆರ್ ( Transferable Development Rights’) ವಿಧಾನದ ಮೂಲಕ ಶಾಸಕರು ಮತ್ತು ಪ್ರಾಧಿಕಾರದ ಪ್ರಯತ್ನದಿಂದ ನಿರ್ಮಾಣಗೊಳ್ಳುತ್ತಿದೆ. ಇನ್ನು 10-12 ದಿನದಲ್ಲಿ ಕೆಲಸ ಪೂರ್ಣಗೊಳ್ಳುತ್ತದೆ. ಈ ಟಿ ಡಿ ಆರ್ ನ ಉಪಯೋಗ ಮುಂದಿನ ನಾಲ್ಕೈದು ವರ್ಷಗಳಲ್ಲಿ ಸಾರ್ವಜನಿಕರಿಗೆ ಅರಿವಿಗೆ ಬರುತ್ತದೆ. ಪ್ರಾಧಿಕಾರದಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ" ಎಂದರು