ಉಡುಪಿ, ಡಿ 29 (DaijiworldNews/MS): ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ದೌರ್ಜನ್ಯ ಎಸಗಿದ ಪೋಲಿಸರನ್ನು ಅಮಾನತು ಮಾತ್ರವಲ್ಲ ವಜಾ ಮಾಡಿ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಕೇರಳ ಆಗ್ರಹ ಮಾಡಿದೆ.
ಬುಧವಾರದಂದು ಉಡುಪಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಅಧ್ಯಕ್ಷ ಅಮಣಿ ಬೆಳ್ವೆ,'ಕೊರಗ ಸಮುದಾಯದಲ್ಲಿ ಹಲ್ಲೆಯಾಗುತ್ತಿರುವುದು ಒಂದೇ ವರ್ಷದಲ್ಲಿ ಇದು ಮೂರನೇ ಬಾರಿ. ಕೊರಗ ಸಮುದಾಯದವರು ಅಸ್ಪಶ್ಯತೆಯಿಂದ ಬಹಳ ಹಿಂದುಳಿದವರಾಗಿದ್ದು, ಈ ಕಾಲಘಟ್ಟದಲ್ಲಿಯೂ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟಿದೆ. ಅಲ್ಲದೇ ಸರ್ಕಾರವು ನಮ್ಮ ಸಮುದಾಯವನ್ನು ಪಿವಿಟಿಜೆ ಎಂದು ಗುರುತಿಸಿದೆ. ಈ ಹಿಂದಿನಿಂದಲೂ ಶೋಷಣೆಗೆ ಒಳಗಾಗುತ್ತಾ ಬಂದಿದ್ದೇವೆ, ಕೊರಗ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗಾಮದಲ್ಲಿ ನಮ್ಮ ಕೊರಗ ಸಮುದಾಯದವರು ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಡಿ ಜೆ ದ್ವನಿವರ್ಧಕ ಪೋಲಿಸರು ಅಮಾನುಷವಾಗಿ ವರ್ತಿಸಿದ್ದಾರೆ. ಹಾಗಾದರೆ ನಮ್ಮವರು ಮಾಡಿದ ತಪ್ಪಾದರೂ ಏನು ? ನಮ್ಮ ಸಮುದಾಯದವರೆಂದರೆ ಅಷ್ಟೊಂದು ತಾತ್ಸಾರವೇ ? ಎಂದು ಪ್ರಶ್ನಿಸಿದ್ದಾರೆ.
ಹಲ್ಲೆ ನಡೆಸಿದ ಸಬ್ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ಬಂಧಿಸಿ, ತನಿಖೆಗೆ ಒಳಪಡಿಸಬೇಕು, ಹಲ್ಲೆಗೊಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕು ಹಾಗೆಯೇ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು,ಇಲ್ಲದಿದ್ದಲ್ಲಿ ಕೊರಾಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಮುಂದಿನ 7 ದಿನಗಳ ಒಳಗೆ ಧರಣಿ ಸತ್ಯಾಗದ ಮಾಡಲಿದ್ದೇವೆ, ಎಂದು ಅಮಣಿ ಬೆಳ್ವೆ, ಎಚ್ಚರಿಸಿದರು.
ಒಕ್ಕೂಟದ ಕಾರ್ಯದರ್ಶಿಯಾಗಿರುವ ಕೆ ಪುತ್ರ ಮಾತನಾಡಿ, 'ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಹಕ್ಕನ್ನು ಕಿತ್ತುಕೊಳ್ಳುವ ವರ್ತನೆ ಇದಾಗಿದೆ. ಮೊದಲು ಮುವಾಡಿ ಎರಡನೇ ಘಟನೆ ಕೊಲ್ಲೂರು ಮತ್ತು ಇದು ಮೂರನೇ ದೌರ್ಜನ್ಯ. ಪೋಲಿಸರ ಮೇಲೆ ಎಸ್ ಸಿ / ಎಸ್ ಟಿ ಕಾಯ್ದೆಯಡಿ ಕೇಸು ದಾಖಲಿಸಬೇಕು. ಇದುವರೆಗೆ ಕೊರಗರ ಮೇಲೆ ಅನ್ಯಾಯ ಎಸಗಿದವರ ಮೇಲೆ ಯಾವುದೇ ಶಿಕ್ಷೆ ಆದ ಉದಾಹರಣೆ ಇಲ್ಲ. ಕೋಟ ಎಸ್ಐ ಮತ್ತು ಸಿಬ್ಬಂದಿ ಗಳನ್ನು ತಕ್ಷಣ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು. ಈ ಕೃತ್ಯ ವನ್ನು ಉದ್ದೇಶಪೂರ್ವಕವಾಗಿಯೋ ಅಥವಾ ಯಾರದೋ ಒತ್ತಡಕ್ಕೆ ಒಳಪಟ್ಟು ಅಥವಾ ಮದ್ಯಪಾನ ಮಾಡಿಯೋ ಎಸಗಿರಬೇಕು. ಸಮುದಾಯದ ನಾಯಕ ರಾದ ಗಣೇಶ್ ಬಾರಕೂರು ಅವರಿಗೆ ಪೋಲಿಸ್ ಮೇಲೆ ಕೇಸ್ ದಾಖಲಿಸದಂತೆ ಒತ್ತಡ ಹಾಕಿದ್ದಾರೆ. ಹಲ್ಲೆಗೊಳಪಟ್ಟ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸುಶೀಲ ನಾಡ, ಅರಣ್ಯ ಮೂಲ ಬುಡಕಟ್ಟು ಸಮುದಾಯದ ಒಕ್ಕೂಟದ ಜಿಲ್ಲಾ ಸಂಚಾಲಕಿ , ಕೋಟ ಎಸ್ಸೈ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲಾಖೆಯೇ ಸೊ-ಮೋಟೋ ಕೇಸು ದಾಖಲಿಸಬೇಕು. ಕೊರಗರ ಹಕ್ಕನ್ನು ಹತ್ತಿಕ್ಕುವ ದುರುದ್ದೇಶದ ಮತ್ತು ವ್ಯವಸ್ಥಿತ ಪಿತೂರಿಯಾಗಿದೆ. ಈ ಪ್ರಕರಣ ನ್ಯಾಯ ಸಿಗದಿದ್ದರೆ ತೀವ್ರ ತರ ಪ್ರತಿಭಟನೆ ಗೂ ನಾವು ಸಿದ್ದರಿದ್ದೇವೆ.
ಬೊಗ್ರಣ್ಣ, ಜಿಲ್ಲಾ ಸಮಿತಿ ಅಧ್ಯಕ್ಷ ರು, ಸತೀಶ್ ಪೆರ್ಡೂರು, ಒಕ್ಕೂಟದ ಕೋಶಾಧಿಕಾರಿ ಉಪಸ್ಥಿತರಿದ್ದರು