ಕಾಸರಗೋಡು, ಡಿ.29 (DaijiworldNews/PY): "ನಾಗರಿಕ ವಿತರಣಾ ವ್ಯವಸ್ಥೆಯನ್ನು ಪೂರ್ಣವಾಗಿ ಪಾರದರ್ಶಕಗೊಳಿಸುವುದು ಸರಕಾರದ ಗುರಿ" ಎಂದು ಕೇರಳ ನಾಗರಿಕ ಪೂರೈಕೆ ಖಾತೆ ಸಚಿವ ಜಿ ಆರ್ ಅನಿಲ್ ಅಭಿಪ್ರಾಯಪಟ್ಟರು.
ಅವರು ಬುಧವಾರ ಕಾಸರಗೋಡಿನಲ್ಲಿ ಪಡಿತರ ಅಂಗಡಿಗಳ ಕುರಿತ ಅಹವಾಲು ಸ್ವೀಕಾರ ಸಮಾರಂಭದ ದಲ್ಲಿ ಮಾತನಾಡುತ್ತಿದ್ದರು.
"ಎಲ್ಲರಿಗೂ ಆಹಾರ ಖಾತರಿಪಡಿಸುವುದು ಸರಕಾರದ ಉದ್ದೇಶವಾಗಿದೆ. ಪ್ರಥಮ ಹಂತದಲ್ಲಿ ಅನರ್ಹರ ಕೈವಶ ಇರುವ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಅರ್ಹರನ್ನು ಸೇರ್ಪಡೆಗೊಳಿಸಲಾಗುವುದು. ಜನವರಿ ತಿಂಗಳೊಳಗೆ ಎಲ್ಲಾ ಜಿಲ್ಲಾ - ತಾಲೂಕು ಕಚೇರಿಗಳಲ್ಲಿ ಫ್ರಂಟ್ ಆಫೀಸ್ ಆರಂಭಿಸಲಾಗುವುದು. ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ನಾಗರಿಕ ಪೂರೈಕೆ ಇಲಾಖಾ ಕಚೇರಿಗಳನ್ನು ಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗುವುದು. ಅಳತೆ, ತೂಕದಲ್ಲಿ ವಂಚನೆ ನಡೆಯದಂತೆ ಗುಣಮಟ್ಟದ ಆಹಾರ ಧಾನ್ಯಗಳನ್ನು ವಿತರಿಸುವ ನಿಟ್ಟಿಯಲ್ಲಿ ಗಮನ ಹರಿಸಲಾಗುವುದು" ಎಂದು ಹೇಳಿದರು.
"ಗೋದಾಮುಗಳಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು. ರಾಜ್ಯ ಸರಕಾರದ ಪ್ರಥಮ ವರ್ಷ ಪೂರ್ಣ ಗೊಳ್ಳುವ ಮೊದಲು ರಾಜ್ಯದ ಎಲ್ಲಾ ಪಡಿತರ ಅಂಗಡಿಗಳನ್ನು ನವಿಕರಿಲಾಗುವುದು. ಸ್ವಚ್ಛತೆ ಹಾಗೂ ಆಹಾರ ಧಾನ್ಯ ಸಂಗ್ರಹಣೆಗೆ ಅಗತ್ಯ ವ್ಯವಸ್ಥೆಗಳನ್ನು ತೆಗೆದುಕೊಳ್ಳಲಾಗುವುದು" ಎಂದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ನಾಗರಿಕ ಪೂರೈಕೆ ಇಲಾಖಾ ರಾಜ್ಯ ನಿರ್ದೇಶಕ ಡಾ. ಡಿ. ಸಜಿತ್ ಬಾಬು, ವಲಯ ರೇಶನಿಂಗ್ ಉಪ ನಿಯಂತ್ರಕ ಕೆ. ಮನೋಜ್ ಕುಮಾರ್, ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.