ಕೋಟ, ಡಿ.29 (DaijiworldNews/PY): ಕೊರಗ ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ ಆರೋಪದ ಹಿನ್ನೆಲೆ, ಕೋಟ ಪಿಎಸ್ಐ ಸಂತೋಷ್ ಅಮಾನತು ಹಾಗೂ ಉಳಿದ ಐವರು ಪೊಲೀಸರನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ಆದೇಶಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಕೋಟೆತಟ್ಟು ಬಾರಿಕೆರೆ ಕೊರಗ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ಭೇಟಿ ನೀಡಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮದುಮಗನ ಮೇಲೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದು, ಜತೆಗೆ ಪೊಲೀಸರು ತಮ್ಮನ್ನು ಠಾಣೆಗೆ ಕರೆದೊಯ್ದು ಬಟ್ಟೆ ತೆಗೆದು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಎಸ್ಪಿ ವಿಷ್ಣುವರ್ಧನ್, "ಲೌಡ್ ಸ್ಪೀಕರ್ ಅವಧಿ 10 ಗಂಟೆ ಮೀರಿದ ನಂತರವೂ ನಡೆಯುತ್ತಿದ್ದು, ಸ್ಥಳೀಯರು ಠಾಣೆಗೆ ದೂರು ನೀಡಿದ್ದರು. ಆಗ ಒಮ್ಮೆ ಎಸ್ಎಚ್ಒ ಸ್ಥಳಕ್ಕೆ ಭೇಟಿ ನೀಡಿ ಶಬ್ದ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಮತ್ತೆ ದೂರು ಬಂದ ಹಿನ್ನಲೆಯಲ್ಲಿ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿದ್ದಾರೆ" ಎಂದಿದ್ದರು.
"ಈ ಘಟನೆ ನಿಜವಾಗಿದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆ ಬಗ್ಗೆ ನಂಬಿಕೆ ಇರಲಿ. ತನಿಖಾ ವರದಿಯನ್ನು ಐಜಿಯವರಿಗೆ ಸಲ್ಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದರು.