ಬಂಟ್ವಾಳ, ಡಿ. 27 (DaijiworldNews/HR): ವಿಟ್ಲ ಪಟ್ಟಣ ಪಂಚಾಯಿತಿಯ 18 ವಾರ್ಡುಗಳಿಗೆ ಸೋಮವಾರ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 73.56 ಮತದಾನವಾಗಿದೆ.
ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕೆತ್ತೂರು ಸರ್ಕಾರಿ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು, ಮೇಗಿನ ಪೇಟೆ, ಬೊಳಂತಿಮೊಗರು, ಸೈಂಟ್ ರೀಟಾ ಶಾಲೆಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಬೆಳಿಗ್ಗೆ 7ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿತ್ತು. ಬೆಳಗಿನ ಇಬ್ಬನಿ ಸಮಸ್ಯೆಯಿಂದ ಬಹುತೇಕ ಮಂದಿ 9 ಗಂಟೆ ನಂತರವೇ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ 10 ಗಂಟೆ ವೇಳೆಗೆ ಶೇ.20ರಷ್ಟು ಮತದಾನವಾಗಿತ್ತು. ಮಧ್ಯಾಹ್ನ ಹೊತ್ತಿಗೆ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದು, ಕೆಲವು ಕಡೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ದೃಶ್ಯ ಕಂಡು ಬಂದಿದ್ದು, ಮಧ್ಯಾಹ್ನ 1 ಗಂಟೆ ವೇಳೆ ಶೇ. 52 ಮತದಾನವಾಗಿತ್ತು. ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಶೇ. 73.56 ರಷ್ಟು ಮತದಾನವಾಗಿದೆ.
ವಿಟ್ಲ ಸರ್ಕಾರಿ ಮಾದರಿ ಶಾಲೆಯಲ್ಲಿರುವ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ ಹೊರತು ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.
ಮತಗಟ್ಟೆಗಳ ಪರಿಸರಕ್ಕೆ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾಧ್ಯಮದವರ ಜತೆ ಮಾತನಾಡಿ, ಪಕ್ಷದ ವಿವಿಧ ಪುತ್ತೂರು ಬಿಜೆಪಿ ಮಂಡಲ ಪದಾಧಿಕಾರಿಗಳು, ಬೂತ್ ಮಟ್ಟದ ಪದಾಧಿಕಾರಿಗಳು ಒಂದು ತಂಡವಾಗಿ ನಿಂತು ಚುನಾವಣೆಯ ನೇತೃತ್ವ ವಹಿಸಿದ್ದರು. ಪ್ರತಿಬೂತಿಗೆ ಮೂರು ಬಾರಿ ಭೇಟಿ ನೀಡಿ, ಮತದಾರರ ಜತೆ ಮಾತುಕತೆ ನಡೆಸಿ, ಮತಯಾಚನೆ ಮಾಡಿದ್ದಾರೆ. ಈ ಬಾರಿಯೂ ಹೆಚ್ಚು ಬಹುಮತದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಜನರು ಮತದಾನ ಮಾಡಲು ಬಾರೀ ಉತ್ಸಾಹದಿಂದ ಆಗಮಿಸಿದ್ದಾರೆ. ಜನರು ಬದಲಾವಣೆಯನ್ನು ಬಯಸಿದ್ದು, ಅದರಂತೆ ಕಾಂಗ್ರೆಸ್ ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ ಆಡಳಿತ ವಹಿಸಲಿದೆ. ನಮ್ಮ ಕಾರ್ಯಕರ್ತರು 18 ವಾರ್ಡ್ಗಳಲ್ಲಿ ಹಗಲು ರಾತ್ರಿ ಎನ್ನದೇ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ನಮಗೆ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದು ಹೇಳಿದರು.
ಚುನಾವಣೆಗೆ ವಿದ್ಯುತ್ ಚಾಲಿತ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಅಗತ್ಯ ವ್ಯವಸ್ಥೆಗಳನ್ನು 18 ವಾರ್ಡ್ ನ ಮತಗಟ್ಟೆಯಲ್ಲಿ ಮಾಡಲಾಗಿತ್ತು. ಪ್ರತಿ ಮತಗಟ್ಟೆಗೆ 4 ಅಧಿಕಾರಿಗಳು, ಓರ್ವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಭೇಟಿ ಪರಿಶೀಲಿಸಿದರು. ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಎಚ್ ಇ ನೇತೃತ್ವದಲ್ಲಿ ಎಸೈಗಳಾದ ಸಂದೀಪ್ ಕುಮಾರ್ ಶೆಟ್ಟಿ, ಸಂಜೀವ ಮತ್ತು ಸಿಬ್ಬಂದಿ ಬಿಗೀ ಬಂದೋ ಬಸ್ತ್ ಏರ್ಪಡಿಸಿದ್ದರು.