ಉಳ್ಳಾಲ, ಡಿ. 27 (DaijiworldNews/HR): ಕೋಟೆಕಾರು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 66.16% ಮತದಾನ ನಡೆದಿದೆ.
ಮತಗಟ್ಟೆ ಸಂಖ್ಯೆ 13 ರಲ್ಲಿ ಶೇ.42.72 ಕನಿಷ್ಟ ಮತದಾನವಾದರೆ, ಮತಗಟ್ಟೆ ಸಂಖ್ಯೆ -5 ರಲ್ಲಿ ಗರಿಷ್ಠ 81.41 ಮತದಾನವಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಧಾನಗತಿಯಲ್ಲಿ ಮತ ಚಲಾವಣೆಯಾದರೆ ಸಂಜೆ 4 ಗಂಟೆ ಬಳಿಕ ಎಲ್ಲಾ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಚಲಾವಣೆ ನಡೆಸಿದರು.
ಅತಿಸೂಕ್ಷ್ಮ ಮತಗಟ್ಟೆ ಸಂಖ್ಯೆ 16 ಮತ್ತು 17 ರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೂ ಮತದಾನ ಆರಂಭದ ವೇಳೆ ಬೂತ್ ಇಡುವ ವಿಚಾರದಲ್ಲಿ ಎಸ್ ಡಿಪಿಐ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಬೂತ್ ತೆರವುಗೊಳಿಸಿ ದೂರದಲ್ಲಿ ಹಾಕಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಂಜೆಯವರೆಗೂ ಶಾಂತಿಯುತವಾಗಿ ಮತದಾನ ಮುಂದುವರಿಯಿತು. ಸೂಕ್ಷ್ಮ ಮತಗಟ್ಟೆ ಸಂಖ್ಯೆ-9 ಮತ್ತು 10 ಮಾಡೂರು ಸರಕಾರಿ ಶಾಲೆಯ ಆವರಣದಿಂದ ಹಲವು ಮೀ. ದೂರದಲ್ಲಿ ಬೂತ್ ರಚನೆಗೆ ಅವಕಾಶ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಂಡಾಯ ಅಭ್ಯರ್ಥಿ ಬೆಂಬಲಿಗರು ರಾಜ್ಯ ಹೆದ್ದಾರಿ ಬಳಿಯೇ ಹೆಚ್ಚಿನ ಸಂಖ್ಯೆಯಲ್ಲಿ ನಿಂತ ಪರಿಣಾಮ ವಾಹನ ಸವಾರರಿಗೆ ಅಡಚಣೆಯುಂಟಾಯಿತು.
ಮತದಾರರ ಪಟ್ಟಿಯಲ್ಲಿ ಕೇರಳದ ವಿದ್ಯಾರ್ಥಿಗಳನ್ನು ಸೇರಿಸಲಾಗಿದೆ. ಅವರು ಸೂಕ್ತ ದಾಖಲೆಗಳನ್ನು ಹಿಡಿದುಕೊಂಡು ಮತ ಚಲಾಯಿಸಲು ಬಂದಲ್ಲಿಯೂ ಗ್ರಾಮಸ್ಥರು ತಡೆಹಿಡಿಯುವುದಾಗಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಮತಗಟ್ಟೆ ಸಂಖ್ಯೆ 12 ನಾಟೆಕಲ್ ಮತ್ತು 7 ಬಗಂಬಿಲ ಪ್ರದೇಶಕ್ಕೆ ಭಾನುವಾರ ಸಂಜೆಯೇ ಭೇಟಿ ನೀಡಿದ ತಹಶೀಲ್ದಾರ್ ಗುರುಪ್ರಸಾದ್ ಅವರು ದಾಖಲೆಗಳಿದ್ದರೂ ವಿದ್ಯಾರ್ಥಿಗಳಿಗೆ ಮತ ಚಲಾಯಿಸಲು ಬಿಡದಂತೆ ಚುನಾವಣಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ಇದರಿಂದಾಗಿ ಮೂರು ವಾರ್ಡುಗಳಲ್ಲಿ ನಡೆಯುತ್ತಿದ್ದ ಅಶಾಂತಿಯ ವಾತಾವರಣವನ್ನು ತಪ್ಪಿಸಲಾಗಿದೆ.
ಕೋಟೆಕಾರು 8ನೇ ವಾರ್ಡಿಗೆ ಸಂಜೆ ವೇಳೆ ಹಸಮಣೆ ತುಳಿದ ಜೋಡಿ ಆಗಮಿಸಿ, ಈ ಪೈಕಿ ವಧು ಶ್ರದ್ಧಾ ನಾಗೇಶ್ ಇವರು ಮತ ಚಲಾಯಿಸಿದರು. ನೂತನ ವಧುವರರಿಗೆ ಮತಗಟ್ಟೆ ಹೊರಗೆ ಬಿಜೆಪಿ ಮುಖಂಡರು ಶುಭಹಾರೈಸಿದರು. ಪ್ರತಿ ಮತಗಟ್ಟೆಗಳಲ್ಲಿ ಹೆಚ್ಚು ಮಹಿಳಾ ಮತದಾರರೇ ಮತದಾನದಲ್ಲಿ ಪಾಲ್ಗೊಂಡರು. ಹಿರಿಯ ಮತದಾರರನ್ನು ಸಂಬಂಧಿಕರು ಹಾಗೂ ಮತಗಟ್ಟೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ ಚಲಾಯಿಸಲು ಸಹಕರಿಸಿದರು.
ಮತಗಟ್ಟೆಗಳಿಗೆ ವೀಕ್ಷಣೆಗೆ ಬಂದಿದ್ದ ಜಿ.ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, "17 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಿಸಲಿದ್ದಾರೆ. ಕೋಟೆಕಾರು ಪ.ಪಂ ಯಲ್ಲಿ ಮತ್ತೆ ಬಿಜೆಪಿ ಆಡಳಿತ ನಡೆಸಲಿದೆ. ಅಭಿವೃದ್ಧಿ ಕೆಲಸವನ್ನು ಗಮನಿಸಿ ಬೆಂಭಲಿಸಲಿದ್ದಾರೆ" ಎಂದರು.
ಕಾಂಗ್ರೆಸ್ ಮುಖಂಡ ಟಿ.ಎಸ್ ಅಬ್ದುಲ್ ನಾಸಿರ್ ಮಾತನಾಡಿ, "ಕಾಂಗ್ರೆಸ್ ಅಭ್ಯರ್ಥಿಗಳಿರುವ ಪ್ರದೇಶದಲ್ಲಿ ಶಾಸಕರ ಸಹಕಾರದೊಂದಿಗೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದನ್ನು ಬೆಂಬಲಿಸಿ ಮತದಾರರು ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ" ಎಂದು ಹೇಳಿದರು.
ಎಸ್ ಡಿಪಿಐ ಮುಖಂಡ ಐಎಂಆರ್ ಇಕ್ಬಾಲ್ ಮಾತನಾಡಿ, "ಜಲಾಲ್ ಬಾಗ್ ಕ್ಷೇತ್ರದಲ್ಲಿ ಪ್ರಬುದ್ಧ ಹಾಗೂ ವಿದ್ಯಾವಂತ ಮತದಾರರು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಹಿಂದಿನ ಕೌನ್ಸಿಲರುಗಳು ನಡೆಸಿದ ಕಾಮಗಾರಿಗಳಲ್ಲಿ ಜನ ಅಸಮಾಧಾನದಲ್ಲಿದ್ದು, ಅಲ್ಲದೆ 80 ಮಂದಿ ವಿದ್ಯಾರ್ಥಿಗಳ ಅಕ್ರಮ ಮತಪಟ್ಟಿಯಲ್ಲಿ ಸೇರಿಸಲಾಗಿದೆ. ಅದನ್ನು ಖಂಡಿತವಾಗಿ ಹಾಕಲು ಬಿಡುವುದಿಲ್ಲ" ಎಂದರು.
ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಪ್ರೈ.ಲಿ ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, "ಚುನಾವಣೆ ಘೋಷಣೆ ನಂತರ ಕಾರ್ಯಕರ್ತರು ರಾತ್ರಿ ಹಗಲು ದುಡಿದಿದ್ದಾರೆ. ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಿದ್ದಾರೆ. ಕೇಂದ್ರದ ಮೋದಿ ಸರಕಾರದಿಂದ ಹಿಡಿದು ರಾಜ್ಯ ಸರಕಾರದ ಅಭಿವೃದ್ಧಿ ಪರ ಕಾರ್ಯಗಳನ್ನು ಜನತೆ ಗುರುತಿಸಿ ಅಭ್ಯರ್ಥಿಗಳನ್ನು ಜಯಿಸುತ್ತಾರೆ ಅನ್ನುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.