ಉಡುಪಿ, ಡಿ. 27 (DaijiworldNews/HR): ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಪ್ಯೂ ಜಾರಿ ಮಾಡಿದ್ದೇವೆ. ಹೊಸವರ್ಷ ಸಂದರ್ಭ ಜನರ ಅನಗತ್ಯ ಓಡಾಟ ತಪ್ಪಿಸಲು ಈ ಕ್ರಮ ಕೈಗೊಂಡಿದ್ದು, ಜನರ ಆರೋಗ್ಯದ ರಕ್ಷಣೆ ಸರ್ಕಾರದ ಮೊದಲ ಕರ್ತವ್ಯವಾಗಿದೆ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೊಸವರ್ಷ ಸಂದರ್ಭ ಜನರ ಅನಗತ್ಯ ಓಡಾಟ ತಪ್ಪಿಸಲು ನೈಟ್ ಕರ್ಪ್ಯೂ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ಸ್ವಯಂ ನಿರ್ಬಂಧಕ್ಕೆ ಜನತೆಯಲ್ಲಿ ಕೋರಿದ್ದಾರೆ. ನಿಯಮದ ಮೂಲಕ ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದೇವೆ. ನೈಟ್ ಕರ್ಫ್ಯೂ ಬಗ್ಗೆ ರಾಜ್ಯದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದ್ದು, ಡಿ.30 ಈ ಕುರಿತು ಒಂದು ಸುದೀರ್ಘ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದರು.
ಇನ್ನು ಜನರ ಆರೋಗ್ಯದ ರಕ್ಷಣೆ ಸರ್ಕಾರದ ಮೊದಲ ಕರ್ತವ್ಯ. ಕೊರೋನಾ ಜಾಸ್ತಿಯಾದರೆ ಸರ್ಕಾರವನ್ನು ದೂರುತ್ತಾರೆ. ಹೊಸ ವರ್ಷ ಆಚರಿಸಿ ಎಂದು ಸರ್ಕಾರ ಹೇಳುವುದಿಲ್ಲ. ನಾನು ನನ್ನ ಜೀವನದಲ್ಲಿ ನ್ಯೂ ಇಯರ್ ಆಚರಿಸಿಲ್ಲ. ನಾನು ಹೊಸವರ್ಷ ಆಚರಿಸುವುದು ಯುಗಾದಿಗೆ. ಉಳಿದವರಿಗೆ ಇದನ್ನೇ ಮಾಡಿ ಅದನ್ನೇ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಯುಗಾದಿಗೆ ಹೊಸವರ್ಷ ಆಚರಿಸುವುದು ನಮ್ಮ ಸಂಸ್ಕೃತಿ. ನ್ಯೂ ಇಯರ್ ಆಚರಣೆಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ. ನಿಮ್ಮ ಹಿತಾಸಕ್ತಿಗೆ ಬಿಟ್ಟದ್ದು" ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವಿಚಾರದ ಕುರಿತು ಮಾತನಾಡಿದ ಅವರು, "ಮತಾಂತರ ನಿಷೇಧ ಕಾಯ್ದೆಯನ್ನು ಯಾಕೆ ವಿರೋಧ ಮಾಡಬೇಕು? ಆಸೆ ಆಮಿಷ ಒಡ್ಡಿ ಮತಾಂತರ ಮಾಡುವವರ ಬಗ್ಗೆ ಮಾತ್ರ ಕಠಿಣ ಕ್ರಮ. ಮತಾಂತರ ಮಾಡುವುದಿಲ್ಲ ಎನ್ನುವವರಿಗೆ ಆತಂಕ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಹಿಂದುಗಳು ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಾರೆ ಎಂದು ಈ ಕಾಯ್ದೆ ತರುತ್ತಿಲ್ಲ. ಯಾವುದೇ ಧರ್ಮಕ್ಕೆ ಸೆಳೆಯಲು ಯಾರೂ ಆಸೆ ಆಮಿಷ ಒಡ್ಡಬಾರದು. ಮತಾಂತರ ಆಗಬೇಕೆಂದರೆ ಡಿಸಿ ಕಚೇರಿಗೆ ಅರ್ಜಿ ಹಾಕಿ. ಕಾಯ್ದೆ ವಿರೋಧಿಸುವವರಲ್ಲಿ ಹಿಡನ್ ಅಜೆಂಡಾ, ದುರುದ್ದೇಶ ಇದೆ" ಎಂದರು.
ಲವ್ ಜಿಹಾದ್ ಕುರಿತು ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವನ್ನು ಕೂಡ ಮತಾಂತರ ಕಾಯ್ದೆಯಲ್ಲಿ ಸೇರಿಸಿದ್ದೇವೆ. ಮತಾಂತರವನ್ನು ದೂರ ದೃಷ್ಟಿಯಲ್ಲಿಟ್ಟುಕೊಂಡು ಮದುವೆ ಆಗಬಾರದು. ವಿಧಾನಪರಿಷತ್ತಿನಲ್ಲಿ ಕಾಯ್ದೆಗೆ ಅನುಮೋದನೆ ಪಡೆಯಬೇಕು. ಅದಕ್ಕೂ ಮುನ್ನ ಸುಗ್ರೀವಾಜ್ನೆ ತರುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಕ್ರೈಸ್ತ ಮಿಷನರಿಗಳನ್ನು ಉದ್ದೇಶವಾಗಿಟ್ಟುಕೊಂಡು ಮಾಡಿರುವ ಕಾನೂನು ಇದಲ್ಲ. ದೀನ ದಲಿತ ಹಿಂದುಳಿದವರ ಹಿತಕ್ಕಾಗಿ ಈ ಕಾನೂನು ಜಾರಿಗೊಳಿಸುವುದು" ಎಂದು ಹೇಳಿದ್ದಾರೆ.