ಉಡುಪಿ, ಡಿ 27 (DaijiworldNews/MS): ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡ ಕಾಯ್ದೆಗೆ, ಸರ್ಕಾರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎಂದು ಕರೆದಿದೆ. ನಮ್ಮ ಸಂವಿಧಾನದ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲಾ ಧರ್ಮದವರಿಗೂ ಏಕರೀತಿಯಲ್ಲಿ ಕೊಟ್ಟಿದ್ದು, ಯಾರು ಬೇಕಾದರೂ ತಾನು ನಂಬಿದ್ದನ್ನು ಜೀವನದಲ್ಲಿ ಅಳವಡಿಸಬಹುದು ಮತ್ತು ಅದನ್ನು ಪ್ರಚಾರ ಮಾಡಬಹುದು. ಇದು ಎಲ್ಲರಿಗೂ ಇರುವಂತ ಧಾರ್ಮಿಕ ಸ್ವಾತಂತ್ರ್ಯ, ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.
ಅವರು ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, " ಕರ್ನಾಟಕ ಸರಕಾರ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ ಎಂದು ತಲೆಬರಹ ಕೊಟ್ಟು ಧಾರ್ಮಿಕ ಸ್ವಾತಂತ್ರ್ಯವನ್ನು ಅಲ್ಪಸಂಖ್ಯಾತರಿಂದ ಕಿತ್ತುಹಾಕುವ ಹಾಗೂ ಹಬ್ಬಗಳ ಆಚರಣೆ ಮೊಟಕುಗೊಳಿಸುವ ರೀತಿಯಲ್ಲಿ ಈ ಕಾಯ್ದೆ ತಂದಿದ್ದಾರೆ" ಎಂದು ಆರೋಪಿಸಿದರು.
'ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಬೇಕಾದರೂ ಹೈಕೋರ್ಟ್ ಇಂದ ಅನುಮತಿ ಪಡೆದುಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ. ಕ್ರೈಸ್ತರ ಆಡಳಿತದಲ್ಲಿ ನಡೆಸುವ ಕಾನ್ವೆಂಟ್ ಸ್ಕೂಲ್ ಕಾಲೇಜಿನಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದರೆ ಅಲ್ಲಿ ಬಂದು ಸಂಘಟನೆಗಳು ದಾಂಧಲೆ ಮಾಡಬಹುದು. ಹೀಗಾಗಿ ಈ ಕಾಯ್ದೆ ಬೇರೆ ಸಂಘಟನೆಯವರಿಗೆ ಪರವಾನಿಗೆ ಕೊಟ್ಟಂತಿದೆ. ಈ ಕಾಯ್ದೆಯು ಮೇಲ್ನೋಟಕ್ಕೆ ಮತಾಂತರ ಎನ್ನುವಂತದ್ದು ದೊಡ್ಡ ಕ್ರಿಮಿನಲ್ ಅಪರಾಧ ಎಂದು ಬಿಂಬಿಸಿ ತಾನು ನಂಬಿದ್ದನ್ನು ಇತರರಿಗೆ ಹೇಳದಂತೆ ಬಯ ಹುಟ್ಟಿಸುವುದು, ಬಡವರಿಗೆ ಅಶಕ್ತರಿಗೆ ಸಹಾಯ ಅಥವಾ ಉಚಿತ ಶಿಕ್ಷಣ ಕೊಟ್ಟಲ್ಲಿ ಇದು ಮತಾಂತರ ಎಂದು ಬಿಂಬಿಸುವ ಕಾಯ್ದೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಕಾಯ್ದೆಯ ದುರುಪಯೋಗದ ಹೆಚ್ಚು ಸಾಧ್ಯತೆ ಇದೆ. ಸರಕಾರದ ಆಡಳಿತ ಪಕ್ಷದಲ್ಲಿರುವ ಶಾಸಕರು ಸಚಿವರು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡುನೀಡುವ ಹೇಳಿಕೆಯನ್ನು ತಕ್ಷಣ ನಿಲ್ಲಿಸಬೇಕು. ಇತ್ತೀಚೆಗೆ ಶ್ರೀ ತೇಜಸ್ವಿ ಸೂರ್ಯ ಇವರು ಉಡುಪಿಗೆ ಬಂದಾಗ ಕ್ರೈಸ್ತರನ್ನು ಮುಸಲ್ಮಾನರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಬೇಕು. ಇದಕ್ಕೆ ವಾರ್ಷಿಕ ಯೋಜನೆಗಳನ್ನು ಹಾಕಬೇಕು ಎಂದು ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಹೇಳಿಕೆಯನ್ನು ನಿಲ್ಲಿಸಬೇಕು. ಹಿಂದೆ ಹೇಳಿದಂತೆ ನಾವು ಬಲವಂತದ ಆಮಿಷದ ಮತಾಂತರವನ್ನು ಈಗಲೂ ವಿರೋಧಿಸುತ್ತೇವೆ. ಇದು ನಮ್ಮ ಧರ್ಮ ಗ್ರಂಥವಾಗಿರುವ ಬೈಬಲ್ ಕೂಡ ಒಪ್ಪುವುದಿಲ್ಲ. ತೇಜಸ್ವಿ ಯವರು ಹೇಳಿಕೆ ವಾಪಾಸು ತೆಗೆದುಕೊಂಡಿದ್ದು ಸ್ವಾಗತಾರ್ಹ. ಆದರೆ ಸಮುದಾಯಕ್ಕೆ ಧಕ್ಕೆಯಾಗುವಂತೆ ಮಾತನಾಡಬಾರದಿತ್ತು. ಜ್ಞಾನವಂತರು, ಬುದ್ಧಿಜೀವಿಗಳು ಇಂತಹ ಹೇಳಿಕೆ ನೀಡುವ ಮೊದಲು ಯೋಚಿಸಬೇಕು. ಯಾವೊಬ್ಬ ಶಾಸಕನೂ ಈ ವಿಧೇಯಕ ಬಗ್ಗೆ ಮಾತನಾಡುತ್ತಿಲ್ಲ. ಹಾಗಾದರೆ ಕ್ರೈಸ್ತ ಧರ್ಮದವರು ಸಮಾಜಕ್ಕೆ ನೀಡುತ್ತಿರುವಂತಹ ಕೊಡುಗೆ ಸೇವೆಗಳಿಗೆ ಬೆಲೆಯಿಲ್ಲವೇ? ಎಂದು ಪ್ರಶಾಂತ್ ಜತ್ತನ್ನ ಪ್ರಶ್ನಿಸಿದ್ದಾರೆ
ಈ ಎಲ್ಲಾ ವಿಚಾರಗಳು ನೋಡುವಾಗ ಈ ಕಾಯ್ದೆ ಕೆಲವೊಂದು ಸಂಘಟನೆಗಳಿಗೆ ದಾಳಿ ಮಾಡಲು ಕಾನೂನು ಕೈಗೆತ್ತಿಕೊಳ್ಳಲು ಲೈಸನ್ಸ್ ಕೊಟ್ಟಂತಿದೆ. ಅದರಿಂದ ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಈ ಕಾಯ್ದೆಯನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ
ಡಾ. ನೇರಿ ಕರ್ನಲಿಯೋ ಜಿಲ್ಲಾಧ್ಯಕ್ಷರು ಕ್ರೈಸ್ತ ಸಂಘ ಸಂಸ್ಥೆಗಳ ಅಂತರಾಷ್ಟ್ರೀಯ ಒಕ್ಕೂಟ, Adcvt ನೊಯೇಲ್ ಕಾರ್ಕಡ ಕಾನೂನು ಸಲಹೆಗಾರರು ಭಾರತೀಯ ಕ್ರೈಸ್ತ ಒಕ್ಕೂಟ, ಮತ್ತು ಗ್ಲಾಡ್ಸನ್ ಕರ್ಕಡ ರಾಜ್ಯ ಸಂಚಾಲಕರು, ಭಾರತೀಯ ಕ್ರೈಸ್ತ ಒಕ್ಕೂಟ ಉಪಸ್ಥಿತರಿದ್ದರು.